ಅವರ ಮೇಲಿನ ಅಭಿಮಾನದಿಂದ ಸ್ವಲ್ಪ ದಿನ ಕೆಲಸ ಮಾಡೋಣ ಅಂದುಕೊಂಡೆ. ಆದರೆ ಸಮಾಧಿ ಬಿಟ್ಟು ಹೋಗಲು ಮನಸಾಗಲಿಲ್ಲ. ಆರಂಭದಲ್ಲಿ ಮಣ್ಣಿನ ಸಮಾಧಿ ಇತ್ತು. ಬ್ಯಾರಿಕೇಡ್ಗಳನ್ನು ಹಾಕುವುದು, ಜನರನ್ನು ನಿಯಂತ್ರಿಸುವುದು, ಸಮಾಧಿ ಮೇಲೆ ಹಾಕುತ್ತಿದ್ದ ರಾಶಿರಾಶಿ ಹೂವಿನ ಹಾರಗಳನ್ನು ತೆರವುಗೊಳಿಸುವ ಕೆಲಸ ಮಾಡುತ್ತಿದ್ದೆವು. ಕೆಲ ಅಭಿಮಾನಿಗಳು ದಿನವೆಲ್ಲಾ ಸಮಾಧಿ ಬಳಿ ಅಳುತ್ತಾ, ನೆಚ್ಚಿನ ನಟನನ್ನು ಕಳೆದುಕೊಂಡ ದುಃಖ ವ್ಯಕ್ತಪಡಿಸುತ್ತಿದ್ದರು.
ಈಗಲೂ ಕೆಲವರು ಹರಕೆ ಮಾಡಿಕೊಂಡು ಹೋಗುತ್ತಾರೆ, ಮಗಳಿಗೆ ಕಂಕಣ ಭಾಗ್ಯ ಕೂಡಿಬರಲೆಂದು ಕೇಳಿಕೊಳ್ಳುತ್ತಾರೆ. ಹರಕೆ ಈಡೇರಿದರೆ ಲಗ್ನಪತ್ರಿಕೆಯನ್ನು ಮೊದಲು ಅಣ್ಣಾವ್ರ ಸಮಾಧಿ ಬಳಿ ತಂದಿಟ್ಟು ಪೂಜೆ ಮಾಡಿಸುತ್ತಾರೆ.
ಎಲ್ಲಾ ಧರ್ಮದ ಅಭಿಮಾನಿಗಳು ಬರುತ್ತಾರೆ, ಅವರಲ್ಲಿ ಕೆಲವರು ಪೂಜೆ ಮಾಡಿಸುತ್ತಾರೆ. ಅವರವರ ಸಂಪ್ರದಾಯದಂತೆ ಪ್ರಾರ್ಥನೆ ಸಲ್ಲಿಸುತ್ತಾರೆ. ಹೊರರಾಜ್ಯಗಳ ಅಭಿಮಾನಿಗಳು ಬರುತ್ತಾರೆ. ವರನಟನ ಬಗ್ಗೆ ಗೊತ್ತಿಲ್ಲದವರು ಕೇಳಿ ತಿಳಿದುಕೊಳ್ಳುತ್ತಾರೆ. ಸಿನಿಮಾಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ...
ಹೀಗೆ ಪ್ರತಿದಿನ ಭಿನ್ನಭಿನ್ನ ಜನರನ್ನು ನೋಡುತ್ತೇವೆ. ದಿನವೂ ನೂರಾರು ಮಂದಿ ಬಂದು ನೆಚ್ಚಿನ ನಟನ ಸ್ಮಾರಕವನ್ನು ಕಣ್ತುಂಬಿಕೊಂಡು ಹೋಗುತ್ತಾರೆ.
ಬೆಳಿಗ್ಗೆ ಕಸ ಗುಡಿಸುವುದು, ಸಮಾಧಿ ಸ್ವಚ್ಛ ಮಾಡುವುದು, ಅಣ್ಣಾವ್ರ ಫೋಟೊಗೆ ಹೂ ಹಾಕುವುದು, ದೀಪಕ್ಕೆ ಎಣ್ಣೆ ಹಾಕುವುದು ನಮ್ಮ ಕಾಯಕ. ಮುಖ್ಯವಾಗಿ ದೀಪ ಆರದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸ.
ಅಣ್ಣಾವ್ರ ಕುಟುಂಬದ ಸದಸ್ಯರು ಇಲ್ಲಿಗೆ ಬಂದಾಗ ಪ್ರೀತಿಯಿಂದ ಮಾತನಾಡಿಸುತ್ತಾರೆ, ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಾರೆ. ಅವರ ಮನೆಯಿಂದ ನನಗೆ ಸಂಬಳ ಸಿಗುತ್ತಿದೆ. ಪುನೀತ್ ರಾಜಕುಮಾರ್ ಬೆಂಗಳೂರಿನಲ್ಲಿದ್ದರೆ ಪ್ರತಿದಿನ ಇಲ್ಲಿಗೆ ಬಂದು ಹೋಗುತ್ತಾರೆ.
ನನಗೆ ಉಳಿದುಕೊಳ್ಳಲು ಇಲ್ಲಿಯೇ ಮನೆ ಕೊಟ್ಟಿದ್ದಾರೆ. ಅಣ್ಣಾವ್ರ ಆಶೀರ್ವಾದ ಇರುವವರೆಗೂ ನಾನು ಈ ಕೆಲಸ ಮಾಡುತ್ತೇನೆ. 11 ವರ್ಷದಿಂದ ಇಲ್ಲಿರುವ ನನ್ನನ್ನು ಜನ ಲಕ್ಷ್ಮೀಪತಿ ಎಂದಲ್ಲ ‘ಸಮಾಧಿಪತಿ’ ಎಂದೇ ಕರೆಯುತ್ತಾರೆ.
***
ಅಣ್ಣಾವ್ರು ಕೊಟ್ಟ ಸಿಹಿತಿನಿಸು...
ಮಹಾಲಕ್ಷ್ಮೀ ಬಡಾವಣೆಯ ಲಲಿತಾ ಅವರು ರಾಜಕುಮಾರ್ ಸಾವನ್ನಪ್ಪಿದ ಮೂರನೇ ದಿನ ಸಮಾಧಿಗೆ ಪೂಜೆ ಸಲ್ಲಿಸಲು ಬಂದರು. ಅಣ್ಣಾವ್ರ ಅಭಿಮಾನಿಯೂ ಆದ ಲಲಿತಾ ಸ್ವಯಂಸೇವಕಿಯಾಗಿ ಕೆಲಸ ಮಾಡಲು ಮುಂದಾದರು. ಅಂದಿನಿಂದ ಇಂದಿನವರೆಗೂ ರಾಜ್ ಸ್ಮಾರಕ ಸ್ವಚ್ಛತೆ ಮಾಡುವ, ಪೂಜೆ ಸಲ್ಲಿಸುವ ಕೆಲಸ ಮಾಡುತ್ತಿದ್ದಾರೆ.
‘15 ಮಂದಿ ಸ್ವಯಂಸೇವಕರಲ್ಲಿ ಲಕ್ಷ್ಮೀಪತಿ, ತಿಪಟೂರು ಮಂಜ ಹಾಗೂ ನಾನು ಉಳಿದುಕೊಂಡೆವು. ನಂತರ ತಿಪಟೂರು ಮಂಜನೂ ಬಿಟ್ಟು ಹೋದ. ಈಗ ಇಬ್ಬರಿದ್ದೇವೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಇಲ್ಲಿಯೇ ಇರುತ್ತೇವೆ. ಕಸ ಗುಡಿಸುತ್ತೇವೆ. ದಿನಕ್ಕೆ ಎರಡು ಬಾರಿ ಪೂಜೆ ಮಾಡುತ್ತೇವೆ. ಅಣ್ಣಾವ್ರ ಕುಟುಂಬ ಸದಸ್ಯರು ಬಂದ್ರೆ ಪೂಜೆಗೆ ಸಿದ್ಧತೆ ಮಾಡಿಕೊಡಬೇಕು.