ಮರಕೋತಿ ಆಟ
ನನ್ನ ಬಾಲ್ಯದ ಸುಂದರ ನೆನಪುಗಳಿರುವುದು ಶಂಕರಪುರ, ವಿ.ವಿ.ಪುರ, ಕತ್ರಿಗುಪ್ಪೆ, ಹನುಮಂತನಗರದಲ್ಲೇ. ನಾವು ವಾಸವಿದ್ದ ಜಾಗದಲ್ಲಿ ಅಪ್ಪ ಹಣ್ಣಿನ ಮರಗಳನ್ನು ಬೆಳೆಸಿದ್ದರು. ಹಣ್ಣುಗಳನ್ನು ತಿನ್ನುವುದು, ಮರಕೋತಿ ಆಡುವುದು ಮಾಮೂಲಿಯಾಗಿತ್ತು. ಅಲ್ಲೇ ದೊಡ್ಡದಾದ ಬಾವಿಯಿತ್ತು. ನಮ್ಮ ಉಪಟಳ ತಾಳಲಾರದೆ ಅದಕ್ಕೆ ಜಾಲರಿ ಹಾಕಿಸಿದ್ದರು. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದೆವು.
ಹನುಮಂತನಗರ ರಾಮಾಂಜನೇಯ ಗುಡ್ಡದ ಎದುರೇ ಬಾಡಿಗೆ ಮನೆಯಲ್ಲಿ ನಾವು ಇದ್ದೆವು. ಗುಡ್ಡದಲ್ಲಿ ದೊಡ್ಡ ಮರಗಳಿದ್ದವು. ಅದರ ಮೇಲೆ ಮರಕೋತಿ ಆಡುತ್ತಿದ್ದೆವು. ನಟ ರಜನಿಕಾಂತ್ ಅವರು ಕೂಡ ಅಲ್ಲೇ ಆಡಿ ಬೆಳೆದವರು. ಅವರ ಅಣ್ಣನ ಮಕ್ಕಳಾದ ರಾಮಕೃಷ್ಣ, ಮಹದೇವ ಸಹ ನನ್ನೊಂದಿಗೆ ಆಡಲು ಬರುತ್ತಿದ್ದರು. ಗವಿಪುರ ಗುಡ್ಡ, ಹರೋಹರ ಗುಡ್ಡ, ಸುಬ್ರಹ್ಮಣ್ಯ ದೇವಸ್ಥಾನದ ಗುಡ್ಡಗಳೂ ಮಕ್ಕಳ ನಲ್ಮೆಯ ತಾಣಗಳಾಗಿದ್ದವು.
ನಾವೆಲ್ಲಾ ಔಟಿಂಗ್ ಹೋಗುತ್ತಿದ್ದೆವು. ತಮಾಷೆ ಮಾಡುವುದು, ವೆಜ್, ನಾನ್ವೆಜ್ ಅಡುಗೆ ಮಾಡಿ ಬಡಿಸುವುದು ನನ್ನದೇ ಕೆಲಸವಾಗಿತ್ತು. ಆಗೆಲ್ಲಾ ಸೈಕಲ್ ನನ್ನ ಸಾಥಿ. ಸಿನಿಮಾ ನಟನಾದ ಮೇಲೆಯೇ ನಾನು ಸ್ಕೂಟರ್ ಖರೀದಿಸಿದ್ದು.
ಅದು ಹಸಿರು ಹೊದ್ದ ಬೆಂಗಳೂರು, ಕೆರೆಗಳು ತುಂಬಿರುತ್ತಿದ್ದವು. ಮುಂದೆ ಕತ್ರಿಗುಪ್ಪೆಯ ಸ್ವಂತ ಮನೆಗೆ ಬಂದೆವು. ಅಲ್ಲಿ ಹತ್ತಿರವೇ ನೀರು ಹರಿಯುತ್ತಿತ್ತು. ಅದರಲ್ಲಿಯೇ ಸ್ನಾನ ಮಾಡುತ್ತಿದ್ದೆವು. ಹೊಸಕೆರೆಹಳ್ಳಿ ಬಳಿಯ ದತ್ತಾತ್ರೆಯ ದೇವಸ್ಥಾನದ ಬಳಿಯೂ ನೀರು ಹರಿಯುತ್ತಿತ್ತು. ಅದರಲ್ಲೇ ಆಡುತ್ತಿದ್ದೆವು. ಕುಡಿಯಲೂ ಬಳಸುತ್ತಿದ್ದೆವು.
ಟೆನಿಸ್ ಕೋಚ್
ಟೆನಿಸ್ ತರಬೇತುದಾರರಾಗಿದ್ದ ಅಪ್ಪನನ್ನು ನೋಡುತ್ತಲೇ ಕಲಿತವ ನಾನು. ಚಿಕ್ಕ ವಯಸ್ಸಿನಲ್ಲಿ ಟೆನಿಸ್ ಕೋಚ್ ಕೂಡ ಆದೆ. ನಾನು ತುಂಬಾ ಶಿಸ್ತಿನ ಮನುಷ್ಯ ಆಗಿದ್ದರಿಂದ ನನ್ನನ್ನು ಕಂಡರೆ ಎಲ್ಲರೂ ಭಯ ಪಡುತ್ತಿದ್ದರು.
ಮೈಕೈ ತುಂಬಿಕೊಂಡು ಸ್ಮಾರ್ಟ್ ಆಗಿದ್ದೆ. ಒಳ್ಳೆಯ ಕೋಚ್ ಬೇರೆ. ಹೀಗಾಗಿ ಹುಡುಗಿಯರಿಗೆ ನನ್ನ ಮೇಲೆ ಕಣ್ಣು. ನಾನು ಟೆನಿಸ್ ತರಬೇತಿ ನೀಡುತ್ತಿದ್ದರೆ, ಮೇಲೆ ನಿಂತು ಬಳಪದಿಂದನಿಂದ ಹೊಡೆಯುತ್ತಿದ್ದರು. ತಿರುಗಿ ನೋಡಿದರೆ ಕಾಲ್ಕೀಳುತ್ತಿದ್ದರು.
ನಂತರದ ದಿನಗಳಲ್ಲಿ ಅದೇ ಜಾಗದಲ್ಲಿ ಷಟಲ್, ಸ್ವಿಮ್ಮಿಂಗ್ ತರಬೇತಿಗಳೂ ಪ್ರಾರಂಭವಾದವು. ನಾನು ಷಟಲ್ ತರಬೇತುದಾರನೂ ಆದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ನಲ್ಲೂ ಟೆನಿಸ್ ಕೋಚ್ ಆಗಿದ್ದೆ. ಕಾಯಂ ಮಾಡಲಿಲ್ಲ ಎಂದು ಕೆಲಸ ಬಿಟ್ಟೆ. ರೋಜರ್ ಬಿನ್ನಿ, ವಿಶ್ವನಾಥ, ವೆಂಗ್ಸರ್ಕಾರ ಎಲ್ಲಾ ಬರುತ್ತಿದ್ದರು. ಹೀಗೆ ಆಸಕ್ತರಿಗೆ ಟೆನಿಸ್ ಕಲಿಸುತ್ತಾ ಟೆನಿಸ್ ಕೃಷ್ಣ ಎಂದೇ ಖ್ಯಾತಿ ಗಳಿಸಿದೆ.