ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್ನ (ಬಿಟಿಸಿ) ಹಂಗಾಮಿ ಅಧ್ಯಕ್ಷರಾಗಿ ವೈ. ಜಗನ್ನಾಥ್ ಅವರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ಭಾನುವಾರ ನಡೆದ ಕ್ಲಬ್ನ ವ್ಯವಸ್ಥಾಪಕ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಮೊದಲು ಅಧ್ಯಕ್ಷರಾಗಿದ್ದ ಹರಿಂದರ್ ಶೆಟ್ಟಿ ವಿರುದ್ಧ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಯಿತು.
ಸಭೆಯಲ್ಲಿ ಹಾಜರಿದ್ದ ಸರ್ಕಾರದ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಕ್ಲಬ್ನ ನಾಮ ನಿರ್ದೇಶಕ ಸದಸ್ಯರೂ ಆದ ಐ.ಎಸ್.ಎನ್. ಪ್ರಸಾದ್ ಅವರು ಸಭೆಯನ್ನು ಎರಡು ವಾರದ ಮಟ್ಟಿಗೆ ಮುಂದೂಡಲು ಸೂಚಿಸಿದರು. ಇದರಿಂದ ಹರಿಂದರ್ ಶೆಟ್ಟಿ ಅವರಿಗೆ ತಮ್ಮ ಮೇಲಿನ ಆರೋಪಗಳ ಬಗ್ಗೆ ಉತ್ತರ ನೀಡಲು ಕಾಲವಕಾಶ ಕೊಟ್ಟಂತಾಗುತ್ತದೆ ಎಂದೂ ಪ್ರಸಾದ್ ಹೇಳಿದರು.
ಆದರೆ 13 ಸದಸ್ಯರ ಪೈಕಿ ಸಭೆಯಲ್ಲಿ ಹಾಜರಿದ್ದ 9 ಸದಸ್ಯರು ಹರಿಂದರ್ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಜಗನ್ನಾಥ್ ಅವರ ಆಯ್ಕೆಗೆ ಬೆಂಬಲ ವ್ಯಕ್ತಪಡಿಸಿದರು.