ಹೂವಿನಹಡಗಲಿ: ತಾಲ್ಲೂಕಿನ ಹರವಿ ಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಿಸಲು ಅಗತ್ಯವಿರುವ ಜಮೀನನ್ನು ರೈತರ ಮನವೋಲಿಸಿ ನೇರ ಖರೀದಿಗೆ ಒಪ್ಪಿಸುವಲ್ಲಿ ಜಿಲ್ಲಾಧಿಕಾರಿ ಡಾ. ರಾಮಪ್ರಸಾದ್ ಯಶಸ್ವಿಯಾದರು.ತಾಲ್ಲೂಕಿನ ಹರವಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಭೂಮಿ ಕಳೆದುಕೊಳ್ಳುವ ಸಂತ್ರಸ್ತ ರೈತರ ಅಹವಾಲು ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ, ‘ರೈತರು ನೇರ ಖರೀದಿಗೆ ಒಪ್ಪುವುದಾದರೆ ತಮ್ಮ ಪರಿಮಿತಿಯಲ್ಲಿ ಗರಿಷ್ಠ ಭೂ ಪರಿಹಾರ ಹಾಗೂ ಮಾನವೀಯತೆ ದೃಷ್ಟಿಯಿಂದ ಪುನರ್ವಸತಿಗೆ ನೆರವು ಕಲ್ಪಿಸಲಾಗುವುದು.
ಒಪ್ಪಿಗೆ ನೀಡದಿದ್ದರೆ ಕಾನೂನಾತ್ಮಕ ಕ್ರಮಗಳಿಂದ ಭೂಸ್ವಾಧೀನಪಡಿಸಿಕೊಳ್ಳುವುದು ಅನಿವಾರ್ಯ ವಾಗುತ್ತದೆ’ ಎಂದು ಹೇಳಿದಾಗ ರೈತರು ನೇರ ಖರೀದಿ ಪ್ರಕ್ರಿಯೆಗೆ ಸಮ್ಮತಿಸಿದರು.ಸಂಪರ್ಕ ರಸ್ತೆಗಾಗಿ 10 ಎಕರೆ ಖಾಸಗಿ ಜಮೀನು, 11 ಎಕರೆ ಸರ್ಕಾರಿ ಜಮೀನು ವಶಕ್ಕೆ ಪಡೆಯಲಾಗುತ್ತದೆ. ಇಲ್ಲಿನ ಮಾರುಕಟ್ಟೆ ಮೌಲ್ಯ ₹2.22 ಲಕ್ಷ ಇದ್ದರೂ ಭೂಮಿ ಕಳೆದುಕೊಳ್ಳುವ ರೈತರಿಗೆ ಅನುಕೂಲ ಕಲ್ಪಿಸಲು ಉದ್ದೇಶದಿಂದ ಎಕರೆಗೆ ₹10ಲಕ್ಷ ಭೂ ಪರಿಹಾರ ನಿಗದಿಪಡಿಸಲಾಗಿದೆ. ಒಪ್ಪಿಗೆ ಕರಾರು ಮಾಡಿಕೊಂಡ ವಾರದೊಳಗೆ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಕೃಷಿ ಜಮೀನಿಗೆ ಎಕರೆವಾರು ಪರಿಹಾರದ ಜತೆಗೆ ಜಮೀನಿನಲ್ಲಿರುವ ಗಿಡಮರ, ಕೊಳವೆಬಾವಿ, ಆಸ್ತಿಪಾಸ್ತಿಗಳಿಗೆ ನಿಯಮಾನುಸಾರ ಪ್ರತ್ಯೇಕ ಪರಿಹಾರ ನೀಡಲಾಗುತ್ತದೆ ಎಂದರು.ಗ್ರಾಮ ಪರಿಮಿತಿಯ 62 ಮನೆಗಳು, 102 ನಿವೇಶನಗಳನ್ನು ವಶ ಪಡಿಸಿಕೊಳ್ಳಲಾಗುತ್ತದೆ. ಈ ಪೈಕಿ ದಾಖಲಾತಿ ಇರುವ 52 ಪಕ್ಕಾ ಮನೆಗಳಿಗೆ ಪರಿಹಾರ ನೀಡಿ, ಬೇರೆಡೆ ನಿವೇಶನ ನೀಡಲಾಗುತ್ತದೆ. 10 ದನದ ಕೊಟ್ಟಿಗೆಗಳಿಗೆ ಸಂಚಿತ ಮೌಲ್ಯ ಆಧರಿಸಿ ಪರಿಹಾರ ವಿತರಿಸಲಾಗುವುದು. ಮನೆ ಕಳೆದುಕೊಳ್ಳುವ ಸಂತ್ರಸ್ತರಿಗಾಗಿ ವಸತಿ ವಿನ್ಯಾಸ ಅಭಿವೃದ್ಧಿಪಡಿಸಿನಿವೇಶನ ಹಂಚಲಾಗುವುದು ಎಂದರು.
ಸಂತ್ರಸ್ತರಾದ ಪ್ರಭು ರಾಘವೇಂದ್ರ, ಚಿದಾನಂದ, ವಿಜಯಕುಮಾರ್, ಸಾರ್ವಜನಿಕ ಉದ್ದೇಶಕ್ಕೆ ಮನೆ, ಜಮೀನು ಕಳೆದುಕೊಳ್ಳುವ ರೈತರಿಗೆ ಮಾನವೀಯತೆ ದೃಷ್ಟಿಯಿಂದ ಗರಿಷ್ಠ ಪರಿಹಾರ ನೀಡುವಂತೆ ಮನವಿ ಮಾಡಿದರು. ಧಾರವಾಡ ವಿಶೇಷ ಭೂ ಸ್ವಾಧೀನಾಧಿಕಾರಿ ಸಿದ್ದಪ್ಪ, ರಾಷ್ಟ್ರೀಯ ಹೆದ್ದಾರಿ ಚಿತ್ರದುರ್ಗ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರವಿಶಂಕರ್, ತಹಶೀಲ್ದಾರ್ ರಾಘವೇಂದ್ರ ರಾವ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.