59 ಆದ್ಯತೆಯ ಕೈಗಾರಿಕೆಗಳಿಗೆ ಇನ್ನಷ್ಟು ಧಾರಾಳವಾಗಿ ಲೈಸೆನ್ಸ್
ನವದೆಹಲಿ, ಮೇ 1– ತಮ್ಮ ಅಗತ್ಯಗಳಿಗನುಗುಣವಾಗಿ 59 ಆದ್ಯತೆಯ ಕೈಗಾರಿಕೆಗಳಿಗೆ ಲೈಸೆನ್ಸ್ ನೀಡಿಕೆಯನ್ನು ಇನ್ನಷ್ಟು ಧಾರಾಳಗೊಳಿಸುವ
1967–68ರ ಆಮದು ನೀತಿಯನ್ನು ಇಂದು ಪ್ರಕಟಿಸಲಾಗಿದೆ. ಈ ಧಾರಾಳವಾದ ಲೈಸೆನ್ಸ್ ನೀಡಿಕೆಯು ಆದ್ಯತೆಯ ಕೈಗಾರಿಕೆಗಳ ದೊಡ್ಡ ಪ್ರಮಾಣದ ಹಾಗೂ ಸಣ್ಣ ಪ್ರಮಾಣದ ಕ್ಷೇತ್ರಗಳೆರಡಕ್ಕೂ ಅನ್ವಯಿಸುವುದು.
ವಿಧಾನ ಪರಿಷತ್ತಿಗೆ ಎಂ. ಕೃಷ್ಣಪ್ಪ ಆಯ್ಕೆ
ಬೆಂಗಳೂರು, ಮೇ 1– ವಿಧಾನ ಸಭೆಯ ಮಾಜಿ ಕಾಂಗ್ರೆಸ್ ಸದಸ್ಯರು ಹಾಗೂ ಮಾಜಿ ಮೇಯರ್ ಆದ ಶ್ರೀ ಎಂ. ಕೃಷ್ಣಪ್ಪ ಅವರು ಬೆಂಗಳೂರು ಜಿಲ್ಲಾ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ರಾಜ್ಯದ ವಿಧಾನ ಪರಿಷತ್ತಿಗೆ ಚುನಾಯಿತರಾಗಿದ್ದಾರೆ.
ಆರ್ಥಿಕ ಸ್ಥಿತಿಯ ಪುನಶ್ಚೇತನಕ್ಕೆ ಕೈಗೊಂಡಿರುವ ಕ್ರಮ–ದಿನೇಶ್ ಸಿಂಗ್
ನವದೆಹಲಿ, ಮೇ 1– ಹೊಸ ಆಮದು ನೀತಿಯನ್ನು ‘ಆರ್ಥಿಕ ಪರಿಸ್ಥಿತಿಯನ್ನು ಪುನಶ್ಚೇತನಗೊಳಿಸಲು ಸರ್ಕಾರ ಕೈಗೊಂಡಿರುವ ಪ್ರಯತ್ನ’ ಎಂದು ವಾಣಿಜ್ಯ ಸಚಿವ ಶ್ರೀ ದಿನೇಶ್ ಸಿಂಗ್ರವರು ಇಲ್ಲಿ ಇಂದು ಹೇಳಿದರು.
ಸ್ವಯಂ ನಿರ್ಧಾರದಿಂದ ಕಾಶ್ಮೀರ ಸಮಸ್ಯೆ ಇತ್ಯರ್ಥ: ತುರ್ಕಿ–ಪಾಕ್ ನಾಯಕರ ಜಂಟಿ ಹೇಳಿಕೆ
ಅಂಕಾರ, ತುರ್ಕಿ, ಮೇ 1– ವಿಶ್ವಸಂಸ್ಥೆಯ ನಿರ್ಣಯಕ್ಕನುಗುಣವಾಗಿ ಸ್ವಯಂ ನಿರ್ಧಾರದ ಮೇಲೆ ಕಾಶ್ಮೀರದ ಭವಿಷ್ಯ ಇತ್ಯರ್ಥವಾಗಬೇಕೆಂದು ತುರ್ಕಿಯ ಪ್ರಧಾನಮಂತ್ರಿ ಸುಲೇಮಾನ್ ಡೆಮಿರೆಲ್ ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಅವರು ಇಂದು ಇಲ್ಲಿ ನೀಡಿದ ಜಂಟಿ ಹೇಳಿಕೆಯಲ್ಲಿ ಘೋಷಿಸಿದ್ದಾರೆ.
ಡೆಮಿರೆಲ್ ಅವರು ಪಾಕಿಸ್ತಾನದಿಂದ ಇರಾನಿಗೆ ಹೊರಡುವಾಗ ಈ ಜಂಟಿ ಹೇಳಿಕೆಯನ್ನು ನೀಡಲಾಯಿತು.