ಸುಂಟಿಕೊಪ್ಪ: ಜಿಲ್ಲಾ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಮೇ 5ರಂದು ಸಿದ್ದಾಪುರದ ನೆಲ್ಯಹುದಕೇರಿಯಲ್ಲಿ ನಡೆಯಲಿರುವ ಬೃಹತ್ ಹಿಂದೂ ಸಮಾಜೋತ್ಸವದ ಅಂಗವಾಗಿ ಬುಧವಾರ ಇಲ್ಲಿನ ವಿಎಚ್ಪಿ ಮತ್ತು ಬಜರಂಗದಳದ ವತಿಯಿಂದ ಬೈಕ್ ಮತ್ತು ವಾಹನ ಜಾಥಾ ನಡೆಯಿತು.
ನೂರಾರು ಹಿಂದೂ ಕಾರ್ಯಕರ್ತರು ಸಮೀಪದ ಕೆದಕಲ್ ಶ್ರೀ ಭದ್ರಕಾಳಿ ದೇವಾಲಯದಲ್ಲಿ ಪೂಜೆ ಮುಗಿಸಿದ ನಂತರ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಜಾಥಾಕ್ಕೆ ಚಾಲನೆ ನೀಡಿದರು.
ಗದ್ದೆಹಳ್ಳ, ಸುಂಟಿಕೊಪ್ಪ, ಕೊಡಗರಹಳ್ಳಿ ಮಾರ್ಗವಾಗಿ ತೆರಳಿ ಏಳನೇ ಹೊಸಕೋಟೆ ಗಣಪತಿ ದೇವಾಲಯದವರೆಗೆ ಭಾರತ ಮಾತೆ ಮತ್ತು ಶಿವಾಜಿಯ ಭಾವಚಿತ್ರದೊಂದಿಗೆ ಬೈಕ್ ಮತ್ತು ವಾಹನ ಜಾಥಾ ನಡೆಸಿ, ಹಿಂದೂ ಸಮಾಜೋತ್ಸವದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ನರಸಿಂಹ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್, ಬಿಜೆಪಿ ನಗರಾಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಬಿಜೆಪಿ ಹಿರಿಯ ಮುಖಂಡರಾದ ವೈ.ಎಂ.ಕರುಂಬಯ್ಯ, ಸೋಮಯ್ಯ, ಹಿಂದೂ ಕಾರ್ಯಕರ್ತರಾದ ಬಿ.ಕೆ.ಮೋಹನ್, ವಿಘ್ನೇಶ್, ಓಡಿಯಪ್ಪನ ಸುದೇಶ್, ರಾಕೇಶ್, ಬಿ.ಕೆ.ಪ್ರಶಾಂತ್, ಹರ್ಷ ಇದ್ದರು.