ಬೆಂಗಳೂರು: ‘ಪೊಲೀಸ್ ಅಧಿಕಾರಿಗಳ ವರ್ಗಾವಣೆಗಳಲ್ಲಿ ಮುಖ್ಯಮಂತ್ರಿ ಸೇರಿ 28 ಹಾಲಿ ಮತ್ತು ಮಾಜಿ ಸಚಿವರು ಹಸ್ತಕ್ಷೇಪ ಮಾಡಿದ್ದಾರೆ’ ಎಂದು ಆರೋಪಿಸಿ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ. ಶಶಿಧರ್ ಗುರುವಾರ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
‘2015 ಮತ್ತು ನಂತರ ನಡೆದ ವರ್ಗಾವಣೆಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು ನಿರ್ದಿಷ್ಟ ಠಾಣೆ, ಉಪ ವಿಭಾಗಗಳಿಗೆ ವರ್ಗಾವಣೆ ಮಾಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಕೋರಿದ್ದಾರೆ.
ಸುಪ್ರೀಂ ಆದೇಶದ ಉಲ್ಲಂಘನೆ: ‘ಪೊಲೀಸ್ ಇಲಾಖೆಯ ಯಾವುದೇ ವಿಚಾರಗಳಿಗೂ ಜನಪ್ರತಿನಿಧಿಗಳು ಮಧ್ಯಪ್ರವೇಶ ಮಾಡುವಂತಿಲ್ಲ. ಶಿಫಾರಸು ಪತ್ರ ನೀಡುವಂತಿಲ್ಲ ಎಂದು 2006ರಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಅಲ್ಲದೇ, ಪೊಲೀಸರ ವರ್ಗಾವಣೆ ವಿಷಯ ಪೊಲೀಸ್ ಸಿಬ್ಬಂದಿ ಮಂಡಳಿ ವ್ಯಾಪ್ತಿಗೆ ಬಿಟ್ಟದ್ದು. ಆದರೂ, ಶಿಫಾರಸು ಪತ್ರ ನೀಡಿರುವುದು ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.