ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಪಂಚತಾರಾ ಹೋಟೆಲ್ ‘ರ್್್ಯಾಡಿಸನ್ ಬ್ಲೂ’ನಲ್ಲಿ 55 ರೂಪಾಯಿ ಮೌಲ್ಯದ ಕುಡಿಯುವ ನೀರಿನ ಬಾಟಲಿಯನ್ನು ₹ 130ಕ್ಕೆ ಮಾರಾಟ ಮಾಡುತ್ತಿದ್ದ ಸಂಗತಿ ಅಳತೆ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು ಗುರುವಾರ ನಡೆಸಿದ ದಾಳಿ ವೇಳೆ ಬೆಳಕಿಗೆ ಬಂದಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ನಿರ್ದೇಶನದ ಮೇರೆಗೆ ಎರಡು ದಿನ ನಗರದ ಮಾಲ್, ಹೋಟೆಲ್ ಹಾಗೂ ಚಿತ್ರಮಂದಿರ ಸೇರಿದಂತೆ 55 ಕಡೆ ಅಧಿಕಾರಿಗಳು ದಾಳಿ ನಡೆಸಿದರು. ಗರಿಷ್ಠ ಮಾರಾಟ ದರಕ್ಕಿಂತ (ಎಂಆರ್ಪಿ) ಹೆಚ್ಚುವರಿ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದು, 15 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಬೃಂದಾವನ ಫುಡ್ ಪ್ಯಾರಡೈಸ್, ಪರಿವಾರ ಬೇಕರಿ, ಹೋಟೆಲ್ ಉಡುಪಿ ಉಪಚಾರ, ಹೋಟೆಲ್ ಸಂತೋಷ್, ಮಾಲ್ ಆಫ್ ಮೈಸೂರು, ಸಬ್ ಅರ್ಬನ್ ಬಸ್ ನಿಲ್ದಾಣದ ಮಳಿಗೆ, ಪಂಚತಾರಾ ಹೋಟೆಲ್ಗಳಾದ ರ್್ಯಾಡಿಸನ್ ಬ್ಲೂ ಹಾಗೂ ಸದರನ್ ಸ್ಟಾರ್ ವಿರುದ್ಧ ದೂರು ದಾಖಲಿಸಲಾಗಿದೆ.
‘ರ್್ಯಾಡಿಸನ್ ಬ್ಲೂ ಹೋಟೆಲಿನಲ್ಲಿ ₹ 20 ಮೌಲ್ಯದ ನೀರಿನ ಬಾಟಲಿಯನ್ನು ₹ 70ಕ್ಕೆ ಹಾಗೂ ₹ 55 ಮುಖಬೆಲೆಯ ಹಿಮಾಲಯ ಬ್ರಾಂಡ್ ನೀರಿನ ಬಾಟಲಿ ಯನ್ನು ₹ 130ಕ್ಕೆ ಮಾರಾಟ ಮಾಡಿದ್ದು ಕಂಡು ಬಂದಿದೆ. ಇತರೆಡೆ ₹ 10ರಿಂದ 30ರವರೆಗೆ ಹೆಚ್ಚುವರಿ ಬೆಲೆಗೆ ಮಾರಾಟ ಮಾಡಿದ್ದು ಗೊತ್ತಾಗಿದೆ’ ಎಂದು ಅಳತೆ, ಕಾನೂನು ಮಾಪನಶಾಸ್ತ್ರ ಇಲಾಖೆಯ ಸರಳಾ ನಾಯರ್ ತಿಳಿಸಿದ್ದಾರೆ.