ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 13–5–1967

Last Updated 12 ಮೇ 2017, 19:30 IST
ಅಕ್ಷರ ಗಾತ್ರ

ರಾಜಕಾರಣಿಗಳಿಗೆ ರಾಷ್ಟ್ರಪತಿ ಕರೆ: ದಾರಿದ್ರ್ಯ ಮತ್ತು ಅಸಮತೆ ನಿವಾರಣೆ ಮುಖ್ಯ
ನವದೆಹಲಿ, ಮೇ 12–
ಪರಸ್ಪರ ದೋಷಾರೋಪಣೆ ಮಾಡುವುದನ್ನು ಬಿಟ್ಟು ಮುಖ್ಯ ಸಮಸ್ಯೆಗಳಾದ ದಾರಿದ್ರ್ಯ ಮತ್ತು ಅಸಮತೆ ನಿವಾರಣೆಗೆ ಗಮನ ವೀಯಬೇಕೆಂದು ರಾಷ್ಟ್ರಪತಿ ಡಾ. ಎಸ್‌. ರಾಧಾಕೃಷ್ಣನ್‌ ಅವರು ಇಂದು ರಾತ್ರಿ ಮಾಡಿದ ಪ್ರಸಾರ ಭಾಷಣದಲ್ಲಿ ರಾಜಕಾರಣಿಗಳಿಗೆ ಕರೆಯಿತ್ತರು.

‘ಹಸಿದ ಹಾಗೂ ನಿರುದ್ಯೋಗಿಗಳಾದ ಜನರಿಂದ ಕ್ರಾಂತಿಗಳು ನಡೆದಿವೆಯೆಂಬುದನ್ನು ಮರೆಯಬೇಡಿ’ ಎಂದು ಎಚ್ಚರಿಕೆ ಇತ್ತರು. ಪ್ರಾದೇಶಿಕ ಅಸಮತೆ ಹಾಗೂ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕುವುದರಿಂದ ಮಾತ್ರ ರಾಷ್ಟ್ರದ ಏಕತೆಯನ್ನು ಭದ್ರ ಬುನಾದಿಯ ಮೇಲೆ ಬೆಳೆಸುವುದು ಸಾಧ್ಯವೆಂದು ಹೇಳಿದರು.

**

ಹಳ್ಳಿಕೇರಿ ಪ್ರಕರಣ ಪ್ರಧಾನಿ ಗಮನಕ್ಕೆ
ಬೆಂಗಳೂರು, ಮೇ 12–
ಮಹಾರಾಷ್ಟ್ರದಲ್ಲಿರುವ ಕನ್ನಡ ಪ್ರದೇಶಗಳಿಗೆ ಭೇಟಿ ನೀಡಿದ ಮಾಜಿ ಸಭಾಪತಿ ಶ್ರೀ ಜಿ.ವಿ. ಹಳ್ಳಿಕೇರಿ ಅವರ ಬಗ್ಗೆ ಅಲ್ಲಿನ ಅಧಿಕಾರಿಗಳು ತೋರಿದ ಅಸಭ್ಯ ವರ್ತನೆಯನ್ನು ಪ್ರಧಾನಿಗೆ ತಿಳಿಸಿದುದಾಗಿ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪ ಅವರು ವರದಿಗಾರರಿಗೆ ತಿಳಿಸಿದರು. ಈ ಪ್ರಕರಣವನ್ನು ಪರಿಶೀಲಿಸು ವುದಾಗಿ ಪ್ರಧಾನಿ ಅವರು ಹೇಳಿದರೆಂದು ಇಂದು ದೆಹಲಿಯಿಂದ ನಗರಕ್ಕೆ ಹಿಂದಿರು ಗಿದ ಮುಖ್ಯಮಂತ್ರಿಗಳು ತಿಳಿಸಿದರು.

ಈ ಪ್ರಕರಣದ ಸಂಬಂಧದಲ್ಲಿ ತಾವು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದಾಗಿಯೂ ತಿಳಿಸಿದರು.

**

‘ಘೇರಾವೊಗಳು ಅಕ್ರಮ, ಶಿಕ್ಷಾರ್‍ಹ’
ನವದೆಹಲಿ, ಮೇ 12–
ಘೇರಾವೊಗಳು ಅಕ್ರಮ ಹಾಗೂ ಕಾನೂನಿನ ಪ್ರಕಾರ ಶಿಕ್ಷಾರ್ಹ ಎಂದು ಭಾರತ ಸರ್ಕಾರದಲ್ಲಿನ ನ್ಯಾಯಾಂಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಕ್ರಮವಾಗಿ ಬಂಧನದಲ್ಲಿಡುವುದು ಎಂದು ಘೇರಾವೊ ಶಬ್ದಕ್ಕೆ ಅರ್ಥ ವಿವರಣೆ ನೀಡಲಾಗಿದೆ. ಆದಕಾರಣ ಘೇರಾವೊಗಳು, ಪ್ರಜಾಸತ್ತಾತ್ಮಕ ಪ್ರತಿಭಟನಾ ಮಾರ್ಗಗಳಲ್ಲವೆಂದು ಕೇಂದ್ರ ಕಾನೂನು ಸಚಿವ ಶಾಖೆ ಅಭಿಪ್ರಾಯ ಪಟ್ಟಿದೆ.

ಶಾಂತಿಯುತ ಜಾಥಾಗಳು, ಪ್ರದರ್ಶನಗಳು ಮತ್ತು ಸತ್ಯಾಗ್ರಹಗಳು ಪ್ರಜಾಸತ್ತಾತ್ಮಕ ಪ್ರತಿಭಟನಾ ಮಾರ್ಗಗಳು.

1947ರ ಕೈಗಾರಿಕಾ ವಿವಾದಗಳ ಕಾನೂನಿನಲ್ಲಿ ಘೇರಾವೊಗಳಿಗೆ ಅವಕಾಶವೇ ಇಲ್ಲವೆಂದು ಕಾನೂನು ಸಚಿವ ಶಾಖೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT