ಯಾದಗಿರಿ: ಪ್ರಸಕ್ತ ಸಾಲಿನ ಎಸ್ಎಫ್ಸಿ ಮುಕ್ತ ನಿಧಿ ಅನುದಾನ ಹಾಗೂ 14ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅಂದಾಜು ಅನುದಾನದ ಕಾಮ ಗಾರಿಗಳ ಕ್ರಿಯಾ ಯೋಜನೆಗೆ ಶುಕ್ರವಾರ ನಡೆದ ನಗರಸಭೆ ತುರ್ತು ಸಭೆಯಲ್ಲಿ ಸದಸ್ಯರು ಒಮ್ಮತದ ಒಪ್ಪಿಗೆ ಸೂಚಿಸಿದರು.
ಎಸ್ಎಫ್ಸಿ ಮುಕ್ತ ನಿಧಿ ಅನುದಾನ ಅಂದಾಜು ಹಂಚಿಕೆ ಮೊತ್ತ ₹3.14 ಕೋಟಿ ಕಾಮಗಾರಿ ಹಾಗೂ 14ನೇ ಹಣಕಾಸು ಯೋಜನೆಯ ₹3.16 ಕೋಟಿ ಅನುದಾನವನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ₹6.30 ಕೋಟಿ ಅನುದಾನ ಹಂಚಿಕೆ ಮಾಡಿ ಕ್ರಿಯಾಯೋಜನೆ ರೂಪಿಸಲಾಯಿತು.
ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರ ವೇತನ ₹38ಲಕ್ಷ, ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ₹10 ಲಕ್ಷ ಅನುದಾನ ಹಂಚಿಕೆ ಮಾಡಲಾಯಿತು. ಉಳಿದ ಅನುದಾನ ₹2.25 ಕೋಟಿ, ಕಳೆದ ವರ್ಷದ ಕೊರತೆ ಅನುದಾನ ₹85ಲಕ್ಷ, ಉಳಿದ ಅನುದಾನ ₹1.36 ಕೋಟಿ ಸೇರಿದಂತೆ ಒಟ್ಟು ₹3.42 ಕೋಟಿ ಅನುದಾನವನ್ನು ವಿವಿಧ ವಾರ್ಡುಗಳ ಅಭಿವೃದ್ಧಿ ಕಾಮಗಾರಿಗಳಿಗೆ ಹಂಚಿಕೆ ಮಾಡಲಾಯಿತು.
14ನೇ ಹಣಕಾಸು ಯೋಜನೆಯಡಿ ₹3.16 ಕೋಟಿ ಅನುದಾನದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ₹63 ಲಕ್ಷ, ಸಾಮೂಹಿಕ ಸಾರ್ವಜನಿಕ ಶೌಚಾಲಯ, ಚರಂಡಿಗಳ ನಿರ್ವಹಣೆಗೆ ₹31ಲಕ್ಷ, ಮಳೆ ನೀರು ಚರಂಡಿ ಕಾಮಗಾರಿಗಳಿಗೆ ₹47ಲಕ್ಷ, ಸಮುದಾಯ ಆಸ್ತಿಗಳ ನಿರ್ವಹಣೆ ₹15ಲಕ್ಷ, ರಸ್ತೆ ಮತ್ತು ಪಾದಾಚಾರಿ ಮಾರ್ಗಗಳ ನಿರ್ವಹಣೆಗೆ ₹47ಲಕ್ಷ, ವಿದ್ಯುತ್ ಬೀದಿ ದೀಪಗಳ ಅಳವಡಿಕೆ, ನಿರ್ವಹಣೆಗೆ ₹31ಲಕ್ಷ, ಸ್ಮಶಾನ, ಚಿತಾಗಾರ, ಕಚೇರಿಗಳ ನಿರ್ವಹಣೆಗೆ ₹15ಲಕ್ಷ ಕಾಮಗಾರಿಗಳ ಕ್ರಿಯಾ ಯೋಜನೆಗೆ ಒಪ್ಪಿಗೆ ಸೂಚಿಸಲಾಯಿತು.
ಸಭೆಯಲ್ಲಿ ಸದಸ್ಯ ಶಂಕರ ರಾಠೋಡ ಮಾತನಾಡಿ,‘ಗಾಂಧಿ ನಗರದಲ್ಲಿ ಪರಿಶಿಷ್ಟ, ಪರಿಶಿಷ್ಟ ಜಾತಿ ಜನ ಹೆಚ್ಚಿನ ಸಂಖ್ಯೆಯಲರುವ ಗಾಂಧಿ ನಗರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಎಸ್ಎಫ್ಸಿ ಅನುದಾನ ದಲ್ಲಿ ತಾರತಮ್ಯ ಮಾಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಉಪಾಧ್ಯಕ್ಷ ಸ್ಯಾಂಸನ ಮಾಳಿಕೇರಿ, ‘ಗಾಂಧಿ ನಗರ ವಾರ್ಡಿಗೆ ₹1ಲಕ್ಷ ಹೆಚ್ಚುವರಿ ಅನುದಾನ ನೀಡುವಂತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶಿಷ್ ಪಂಗಡದವರು ಹೆಚ್ಚಿರುವ ಆರು ವಾರ್ಡ್ಗಳಿಗೆ ₹14, ಪರಿಶಿಷ್ಟ ಜಾತಿ ನಿವಾಸಿಗಳಿ ಹೆಚ್ಚಿರುವ 11 ವಾರ್ಡುಗಳಿಗೆ 40ಲಕ್ಷ ಅನುದಾನವನ್ನು ಹಂಚಿಕೆ ಮಾಡ ಲಾಗಿದೆ. ತಾರತಮ್ಯ ಇಲ್ಲದೇ ಎಲ್ಲಾ ವಾರ್ಡುಗಳಿಗೆ ಹಣ ಹಂಚಿಕೆ ಮಾಡಲಾಗಿದೆ’ ಎಂದು ಅಧ್ಯಕ್ಷೆ ಲಲಿತಾ ಅನಪುರ ಸಭೆಯಲ್ಲಿ ವಿವರಿಸಿದರು.
‘ನಗರದ ವಾರ್ಡ್ಗಳಲ್ಲಿರುವ ಕುಡಿಯುವ ನೀರು, ಚರಂಡಿಗಳ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಚರಂಡಿ ನಿರ್ವಹಣೆಗೆ ₹10ಲಕ್ಷ, ಆಶ್ರಯ ಕಾಲೊನಿಯಲ್ಲಿ ಕುಡಿಯುವ ನೀರಿಗಾಗಿ ₹10ಲಕ್ಷ, ವಿದ್ಯುತ್ ನಿರ್ವಹಣೆಗೆ ₹11ಲಕ್ಷ ಮೀಸಲಿಡಲಾಗುವುದು’ ಎಂದು ಅಧ್ಯಕ್ಷರು ಸದಸ್ಯರ ಗಮನಕ್ಕೆ ತಂದರು. ಇದಕ್ಕೆ ಎಲ್ಲಾ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಸ್ಯಾಂಸನ್ ಮಾಳಿಕೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ನಾಜೀಮ್ ಅಹ್ಮದ್ ಹಾಗೂ ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.