ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿದ್ದ ಬೃಹತ್ ಪೆಂಡಾಲ್ ಕೆಳಗೆ, ವಿಶಾಲವಾದ ಅಲಂಕೃತ ವೇದಿಕೆಯಲ್ಲಿ ಭಾನುವಾರ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವ ವಿಜೃಂಭಣೆಯಿಂದ ನೆರವೇರಿತು.
ಆಂಧ್ರಪ್ರದೇಶದ ಸಿಂಹಾಚಲಂನಿಂದ ವಿಶೇಷ ರಥದಲ್ಲಿ ತರಲಾಗಿದ್ದ ಲಕ್ಷ್ಮೀನರಸಿಂಹಸ್ವಾಮಿ ಉತ್ಸವ ಮೂರ್ತಿಗಳನ್ನು ಬೆಳಿಗ್ಗೆ ಪ್ರವಾಸಿ ಮಂದಿರದಿಂದ ಹೆಗಲ ಮೇಲೆ ಹೊತ್ತು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿರುವ ವೇದಿಕೆಗೆ ತರಲಾಯಿತು. ಸಚಿವ ಕೆ.ಆರ್.ರಮೇಶ್ ಕುಮಾರ್ ಅವರು ಇತರರೊಂದಿಗೆ ಮೂರ್ತಿಗಳನ್ನು ಹೆಗಲ ಮೇಲೆ ಹೊತ್ತು ತಂದದ್ದು ವಿಶೇಷವಾಗಿತ್ತು.
ಸಿಂಹಾಚಲಂ ದೇವಾಲಯದ ಪಂಡಿತರು ಹಾಗೂ ಪುರೋಹಿತರು ದೇವರ ಕಲ್ಯಾಣವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ವೇದಿಕೆಯ ಮುಂದೆ ಆಸೀನರಾಗಿದ್ದ ಸಾವಿರಾರು ಜನರು ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡರು.
ಮಂತ್ರ ಘೋಷದೊಂದಿಗೆ ಕಲ್ಯಾಣೋತ್ಸವ ನಡೆಯುತ್ತಿದ್ದಾಗ, ವೀಕ್ಷಕರು ಭಕ್ತಿ ಭಾವ ಪರವಶರಾಗಿ ಗೋವಿಂದ, ಗೋವಿಂದ ಎಂದು ಗೋವಿಂದನ ನಾಮಸ್ಮರಣೆ ಮಾಡುತ್ತಿದ್ದರು.
ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ತಮ್ಮ ಪತ್ನಿ ಸಮೇತ ವೇದಿಕೆಗೆ ಬಂದು ದೇವರಿಗೆ ನಮಿಸಿದರು. ಅನಂತರ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ. ಎಂ.ಆರ್.ಜಯರಾಂ ತಮ್ಮ ಶ್ರೀಮತಿಯೊಂದಿಗೆ ವೇದಿಕೆ ಗೌರವಕ್ಕೆ ಪಾತ್ರರಾದರು.
ಕಲ್ಯಾಣೋತ್ಸವ ಮುಗಿದ ಮೇಲೆ, ಸಚಿವ ಕೆ.ಆರ್.ರಮೇಶ್ಕುಮಾರ್ ಮಾತನಾಡಿ, ‘ಇಲ್ಲಿ ಬರ ಕಾಡುತ್ತಿದೆ. ಜನರು ಹೇಗೋ ಬದುಕುತ್ತಿದ್ದಾರೆ. ಆದರೆ ಪ್ರಾಣಿ, ಪಕ್ಷಿಗಳು ನೀರು, ಮೇವಿಗಾಗಿ ಪರಿತಪಿಸುತ್ತಿವೆ. ಮಳೆ ಬರಲಿ, ಸಮೃದ್ಧವಾಗಿ ಬೆಳೆಯಾಗಲಿ ಎಂಬ ಉದ್ದೇಶದಿಂದ ಭಗವಂತನ್ನು ಪ್ರಾರ್ಥಿಸಲು ಕಲ್ಯಾಣೋತ್ಸವ ಏರ್ಪಡಿಸಲಾಗಿದೆ’ ಎಂದರು.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಸೈನಿಕರು, ಅನ್ನ ನೀಡುವ ರೈತರು ಹಾಗೂ ಮನರಂಜನೆ ಒದಗಿಸುವ ಕಲಾವಿದರನ್ನು ಗೌರವಿಸುವುದು ಜನ್ಮಭೂಮಿ ವೇದಿಕೆಯ ಉದ್ದೇಶವಾಗಿದೆ. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದಕ್ಕಾಗಿಯೇ ರಾಜ್ಯ ಮಟ್ಟದ ವಾಲಿಬಾಲ್ ಟೂರ್ನಿನಡೆಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ಐದು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ಯಶಸ್ಸಿನ ಹಿಂದೆ ಹಲವರ ಶ್ರಮವಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಹೇಳಿದರು.
ಸಿಂಹಾಚಲಂ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಧರ್ಮಾಧಿಕಾರಿ ಅಶೋಕ ಗಜಪತಿ ರಾಜು, ಜೋತಿಷಿ ಸತ್ಯನಾರಾಯಣ ಶಾಸ್ತ್ರಿ, ಸಂಸದ ಕೆ.ಎಚ್.ಮುನಿಯಪ್ಪ, ಕೆಜಿಎಫ್ ಶಾಸಕಿ ರಾಮಕ್ಕ, ಮುಖಂಡರಾದ ವೈ. ಸಂಪಂಗಿ, ಶ್ರೀನಿವಾಸಗೌಡ, ವಿ.ವೆಂಕಟಮುನಿಯಪ್ಪ, ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಲ್.ಗೊಪಾಲಕೃಷ್ಣ, ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಉಪ ವಿಭಾಗಾಧಿಕಾರಿ ಸಿ.ಎನ್.ಮಂಜುನಾಥ್, ತಹಶೀಲ್ದಾರ್ ವೈ.ರವಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮ್ಯಾಕಲ ನಾರಾಯಣಸ್ವಾಮಿ, ಗೋವಿಂದಪ್ಪ, ಪುರಸಭಾಧ್ಯಕ್ಷೆ ಅರುಣಾ ಜಗದೀಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬಿ.ಇ.ಸುಗುಣಾ ರಾಮಚಂದ್ರ, ಮುಖಂಡರಾದ ಬಿ.ವೆಂಕಟರೆಡ್ಡಿ, ಎಲ್.ವಿ.ಗೋವಿಂದಪ್ಪ ಇದ್ದರು.
30 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಭಾಗವಹಿಸಿದ್ದ ಎಲ್ಲರಿಗೂ ಲಾಡು ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.