ಹೊನ್ನಾಳಿ: ಪ್ರತಿವರ್ಷ ಐದು ಲಕ್ಷ ಯುವಕ, ಯುವತಿಯರಿಗೆ ಉದ್ಯೋಗ ಕೊಡುವ ಕೌಶಲ ಅಭಿವೃದ್ಧಿ ತರಬೇತಿ ನೀಡುವುದು ರಾಜ್ಯ ಸರ್ಕಾರದ ಮಹತ್ವಾ
ಕಾಂಕ್ಷೆಯ ಯೋಜನೆಯಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಕೌಶಲ ವೆಬ್ ಪೋರ್ಟಲ್ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ‘2016–17ನೇ ಸಾಲಿನಲ್ಲಿ ಮುಖ್ಯ
ಮಂತ್ರಿ ಸಿದ್ದರಾಮಯ್ಯ ಆಯವ್ಯಯದಲ್ಲಿ ಕೌಶಲಾಭಿವೃದ್ಧಿಗೆ ಒತ್ತು ಕೊಡುವುದಾಗಿ ಹೇಳಿದ್ದರು.
ಅದರಂತೆ ರಾಜ್ಯದಾದ್ಯಂತ ಈ ಯೋಜನೆಗೆ ಚಾಲನೆ ಕೊಡಲಾಗುತ್ತಿದೆ. ಶೇ 70ರಷ್ಟು ನಿರುದ್ಯೋಗಿಗಳಿಗೆ ನೇರವಾಗಿ ಸರ್ಕಾರವೇ ಉದ್ಯಮಿಗಳ ಮೂಲಕ ಉದ್ಯೋಗ ಕೊಡಿಸಲಿದೆ. ಶೇ 30ರಷ್ಟು ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಂಡುಕೊಳ್ಳುವ ಅವಕಾಶ ಮಾಡಿಕೊಡಲಿದೆ’ ಎಂದು ಅವರು ತಿಳಿಸಿದರು.
ತಹಶೀಲ್ದಾರ್ ಎನ್.ಜೆ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ‘16 ವರ್ಷದಿಂದ 35 ವರ್ಷದೊಳಗಿನ ನಿರುದ್ಯೋಗಿ ಯುವಕ, ಯುವತಿಯರಿಗೆ ಇದು ಸಹಕಾರಿಯಾಗಲಿದೆ. ಮೇ 15ರಿಂದಲೇ ನೋಂದಣಿ ಕಾರ್ಯಕ್ರಮ ವನ್ನು ಕಂದಾಯ ಇಲಾಖೆ ಆರಂಭಿಸಿದೆ. ತಾಲ್ಲೂಕು ಕಚೇರಿ ಹಿಂಭಾಗದಲ್ಲಿರುವ ಹಳೆಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಂಬಂಧಪಟ್ಟ ದಾಖಲೆಗಳೊಂದಿಗೆ ನೋಂದಣಿ ಮಾಡಿಕೊಳ್ಳಬಹುದು’ ಎಂದು ತಿಳಿಸಿದರು.
ಬಿಇಒ ಜಿ.ಎಸ್.ರಾಜಶೇಖರಪ್ಪ ಮಾತನಾಡಿ, ನಿರುದ್ಯೋಗಿ ಯುವಕ, ಯುವತಿಯರಿಗೆ ಯಾವ ತರಬೇತಿ ಅವಶ್ಯಕತೆ ಇದೆ, ಯಾವ ಉದ್ಯೋಗದ ಅಗತ್ಯತೆ ಇದೆ ಎಂಬುದನ್ನು ಮನಗಂಡು ತರಬೇತಿ ನೀಡಲಾಗುವುದು ಎಂದರು.
ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಅವರ ಕ್ಷೇತ್ರದ ಸುತ್ತಮುತ್ತ ಉದ್ಯೋಗ ಕೈಗೊಳ್ಳಲು ಅವಕಾಶ ಮಾಡಿಕೊಡಲಾಗುವುದು. ಈ ಇಲಾಖೆ ಮುಖ್ಯಮಂತ್ರಿ ಬಳಿಯೇ ಇರುವುದರಿಂದ ಸೌಲಭ್ಯ ಪಡೆದುಕೊಳ್ಳಲು ಸುಲಭವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಶ್ರೀದೇವಿ ಧರ್ಮಪ್ಪ, ಉಪಾಧ್ಯಕ್ಷೆ ವೀಣಾ ಸುರೇಶ್, ತಾಲ್ಲೂಕು ಪಂಚಾಯ್ತಿ ಸದಸ್ಯ ಪಿರ್ಯಾನಾಯ್ಕ, ಕಂದಾಯ ಇಲಾಖೆಯ ಗಣೇಶ್, ಸಂತೋಷ್ ಉಪಸ್ಥಿತರಿದ್ದರು.