ತೀರ್ಥಹಳ್ಳಿ: ಮುಚ್ಚುವ ಭೀತಿಯಲ್ಲಿದ್ದ ಶಾಲೆಗೆ ಮಕ್ಕಳು ದಾಖಲಾಗುವಂತೆ ಆಸ್ಥೆ ವಹಿಸುವ ಮೂಲಕ ತಾಲ್ಲೂಕಿನ ಹುಣಸವಳ್ಳಿ ಗ್ರಾಮಸ್ಥರು ಈಗ ಸಂತಸದ ನಗೆ ಬೀರಿದ್ದಾರೆ.
ಈ ಶಾಲೆಯಲ್ಲಿಯೇ ಅಕ್ಷರ ಕಲಿತ ಶಿಲ್ಪಾ, ಪವಿತ್ರಾ ಆರಂಭಿಸಿದ ‘ಶಾಲೆ ಉಳಿಸುವ ಹೋರಾಟ’ಕ್ಕೆ ಸಹನಾ, ಮುನ್ನೂರು ಮೋಹನಶೆಟ್ಟಿ ಕೈಜೋಡಿಸಿದರು. ಉಳಿದ ಗ್ರಾಮಸ್ಥರು ಜತೆಯಾದರು.
1ರಿಂದ 7ರವರೆಗೆ ತರಗತಿಗಳು ನಡೆಯುವ ಈ ಶಾಲೆಯಲ್ಲಿ ಸಾವಿರಾರು ಮಂದಿ ಶಿಕ್ಷಣ ಪಡೆದಿದ್ದಾರೆ. ಆದರೆ ಕ್ರಮೇಣ ಖಾಸಗಿ ಶಾಲೆಗಳ ಭರಾಟೆಯಿಂದ ಸರ್ಕಾರಿ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.
ಒಂದು ಕಾಲದಲ್ಲಿ 150ರಿಂದ 200 ವಿದ್ಯಾರ್ಥಿಗಳಿರುತ್ತಿದ್ದ ಈ ಶಾಲೆಯಲ್ಲಿ ಕಳೆದ ವರ್ಷ ಇದ್ದ ವಿದ್ಯಾರ್ಥಿಗಳ ಸಂಖ್ಯೆ ಕೇವಲ ಐದು.
ಇದರಿಂದ ಕಂಗಾಲಾದ ಗ್ರಾಮಸ್ಥರು ಶಾಲೆ ಉಳಿಸಿಕೊಳ್ಳಬೇಕೆಂದು ಪಣ ತೊಟ್ಟರು. ಸರ್ಕಾರಿ ಶಾಲೆಯ ಮಹತ್ವವನ್ನು ತಿಳಿಸುವ ಸಲುವಾಗಿ ಮನೆ ಮನೆಗೆ ತೆರಳಿ ಶಾಲೆ ಉಳಿವಿಗೆ ಸಹಕರಿಸುವಂತೆ ಅಭಿಯಾನ ಆರಂಭಿಸಿದರು. ಪೋಷಕರ ಮನವೊಲಿಸಿದರು.
ಅದರ ಫಲವಾಗಿ ಈಗ ಈ ಶಾಲೆಯಲ್ಲಿ 30 ಮಕ್ಕಳು ಇದ್ದಾರೆ. ಪೋಷಕರು ಮನಸ್ಸು ಮಾಡಿದ್ದು ಇದಕ್ಕೆ ಕಾರಣ. ಗ್ರಾಮ ಪಂಚಾಯ್ತಿಯೊಂದಿಗೆ ಸಭೆ: ಗ್ರಾಮಸ್ಥರು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರೊಂದಿಗೆ ಸಭೆ ನಡೆಸಿದ್ದಾರೆ.
ಉತ್ತಮ ಶಿಕ್ಷಣಕ್ಕಾಗಿ ಹೆಚ್ಚುವರಿ ಶಿಕ್ಷಕರ ನೇಮಕ, ಧನ ಸಂಗ್ರಹ, ಶಾಲೆ ಯಿಂದ ದೂರವಿರುವ ಮಕ್ಕಳನ್ನು ಶಾಲೆಗೆ ಕರೆತರಲು ವಾಹನ ವ್ಯವಸ್ಥೆ, ಆಧುನಿಕ ಹಾಗೂ ತಂತ್ರಜ್ಞಾನದ ಸಹಾಯದಿಂದ ಕಲಿಕೆಗೆ ಅವಕಾಶ ಸೇರಿದಂತೆ ಶಾಲೆಯ ಸಮಗ್ರ ಅಭಿ ವೃದ್ಧಿಗೆ ಅಗತ್ಯವಿರುವ ಅನುಕೂಲಗಳನ್ನು ಕಲ್ಪಿಸು ವಂತೆ ಮನವಿ ಮಾಡಿದ್ದಾರೆ.
ಸಭೆಯಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಅರುಣಾಚಲ, ಗ್ರಾಮ ಪಂಚಾಯ್ತಿ ಸದಸ್ಯರಾದ ಎಚ್.ಪಿ. ಅನಿಲ್, ಎಂ.ಪಿ. ಜಗನ್ನಾಥ್, ಬಂಡೆ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಕೃಷ್ಣಮೂರ್ತಿ, ಗಿರಿರಾಜ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಾಜ್ಯ ಸಮನ್ವಯ ವೇದಿಕೆ ಸಂಚಾಲಕ ಕಬಸೆ ಅಶೋಕ ಮೂರ್ತಿ, ಜಂಟಿ ಕಾರ್ಯದರ್ಶಿ ಹೇಮಾ ಸಾಗರ್, ಪ್ರಗತಿ ಪರ ಚಿಂತಕ ದೂಗೂರು ಪರ ಮೇಶ್ವರ ಇದ್ದರು. ಮಕ್ಕಳ ಕೊರ ತೆಯಿಂದ ಮುಚ್ಚಿ ಹೋಗಬೇಕಿದ್ದ ಹುಣಸವಳ್ಳಿ ಶಾಲೆ ಗ್ರಾಮಸ್ಥರ ಒತ್ತಾಸೆಯಿಂದ ಜೀವಪಡೆದಿದೆ.
–ಶಿವಾನಂದ ಕರ್ಕಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.