ಬೆಂಗಳೂರು: ‘ಚಿತ್ರಕಲಾ ಪರಿಷತ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ದೊರಕಿಸಿಕೊಡುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಜತೆ ಒಪ್ಪಂದ ಮಾಡಿಕೊಳ್ಳುವ ಚಿಂತನೆಯಿದೆ’ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಅವರು ಹೇಳಿದರು.
ನಗರದಲ್ಲಿ ಶನಿವಾರ ಬಿದರಿ ಕಲೆಯ ಪುನರುಜ್ಜೀವನ ಕಾರ್ಯಾಗಾರ ಹಾಗೂ ಪ್ರದರ್ಶನದ ಸಮಾರೋಪದಲ್ಲಿ ಅವರು ಮಾತನಾಡಿದರು.
‘ಉನ್ನತ ಶಿಕ್ಷಣ ಇಲಾಖೆಯಿಂದ ಪ್ರತಿವರ್ಷ ₹ 1.5 ಕೋಟಿ ಅನುದಾನ ಸಿಗುತ್ತಿದೆ. ಸಂಪನ್ಮೂಲದ ಕೊರತೆಯಿಂದಾಗಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲು ಆಗುತ್ತಿಲ್ಲ. ಪ್ರವಾಸೋದ್ಯಮ ಇಲಾಖೆ ಜತೆ ಎರಡು ತಿಂಗಳಲ್ಲಿ ಒಪ್ಪಂದ ಮಾಡಿಕೊಳ್ಳಲಿದ್ದೇವೆ’ ಎಂದು ಹೇಳಿದರು.
‘ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿದ ದೇಶದ ಕಲಾವಿದರಿಂದ ನಗರದಲ್ಲಿ ಕಾರ್ಯಾಗಾರ, ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಸಂತೆಯನ್ನು ಏರ್ಪಡಿಸುವ ಚಿಂತನೆಯಿದೆ. ‘ಚಿತ್ರ ಸಂತೆ’ ರೀತಿಯೇ ರಾಷ್ಟ್ರ ಮಟ್ಟದಲ್ಲೂ ‘ಆರ್ಟ್ ಫೇರ್’ ಏರ್ಪಡಿಸುತ್ತೇವೆ’ ಎಂದು ಮಾಹಿತಿ ನೀಡಿದರು.