ಬೆಳಗಾವಿ: ಭೂಗತ ಪಾತಕಿ ರಶೀದ್ ಮಲಬಾರಿ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ಪ್ರಯೋಗಿಸಲು ಬೆಳಗಾವಿ ನಗರ ಪೊಲೀಸರು ಮುಂದಾಗಿದ್ದಾರೆ.
ವ್ಯಾಪಾರಿ ಸುರೇಶ ರೇಡೆಕರ್ ಅವರ ಪುತ್ರ ರೋಹನ್ ಅಪಹರಣ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಶೀದ್ ಪೊಲೀಸರಿಗೆ ಬೇಕಾಗಿದ್ದಾನೆ. ಎರಡು ವರ್ಷಗಳ
ಹಿಂದೆ ರೋಹನ್ ಅವರನ್ನು ಹತ್ಯೆ ಮಾಡಿ, ಚೋರ್ಲಾ ಅರಣ್ಯ ಪ್ರದೇಶದಲ್ಲಿ ಶವ ಎಸೆಯಲಾಗಿತ್ತು.
ರಶೀದ್ ಭಾಗಿಯಾಗಿರುವ ಕೊಲೆ ಪ್ರಕರಣ ಸೇರಿದಂತೆ ವಿವಿಧ ಗಂಭೀರ ಅಪರಾಧ ಪ್ರಕರಣಗಳ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿದರೆ, ಆರೋಪಿಗೆ ನಿರೀಕ್ಷಣಾ ಜಾಮೀನು ಸಿಗುವುದಿಲ್ಲ. ಅವರ ಆಸ್ತಿಯನ್ನು ಜಪ್ತಿ ಮಾಡಬಹುದು
ಎನ್ನುವ ಕಾರಣಕ್ಕೆ ಕೋಕಾ ಪ್ರಯೋಗಿಸಲು ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
****
‘ನಾಡ ವಿರೋಧಿ ಚಟುವಟಿಕೆ: ಕಠಿಣ ಕ್ರಮ’
ಬೆಳಗಾವಿ: ‘ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ನಗರಪಾಲಿಕೆ ಸದಸ್ಯರು ನಾಡವಿರೋಧಿ ಚಟುವಟಿಕೆ ನಡೆಸಿದರೆ, ಅವರ ಸದಸ್ಯತ್ವ ರದ್ದುಪಡಿಸುವ ಕುರಿತು ಚಿಂತನೆ ನಡೆಸಬೇಕಾಗುತ್ತದೆ’ ಎಂದು ನಗರಾಭಿವೃದ್ಧಿ ಸಚಿವ ಆರ್.ರೋಷನ್ಬೇಗ್ ಸೋಮವಾರ ಎಚ್ಚರಿಕೆ ನೀಡಿದರು.
‘ಈ ಕುರಿತು ಸದಸ್ಯರ ಸಭೆ ಕರೆದು ಎಚ್ಚರಿಕೆ ನೀಡಲಾಗುವುದು. ಪಾಲಿಕೆಯಲ್ಲಿ ಕರ್ನಾಟಕ ವಿರೋಧಿ ಘೋಷಣೆ ಕೂಗಿದರೆ ಅಂಥವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ದಲಿತರ ಮನೆಗೆ ಹೋಗಿ ಹೋಟೆಲ್ ಊಟ ಮಾಡುತ್ತಿದ್ದಾರೆ ಎನ್ನುವ ಸಂಗತಿ ಕೇಳಿದರೆ ನಗು ಬರುತ್ತದೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ‘ಷೋ’ ಮಾಡುತ್ತಿರುವ ಅವರು, ದಲಿತರ ಮನೆಯ ಊಟವನ್ನೇಕೆ ಸೇವಿಸುವುದಿಲ್ಲ’ ಎಂದು ಪ್ರಶ್ನಿಸಿದರು.
‘ಬಿಜೆಪಿ ನಾಯಕರು, ಮುಂಗಾರು ಸಮೀಪಿಸಿದಾಗ ಬರ ಅಧ್ಯಯನ ಪ್ರವಾಸ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.