ಕೋಲಾರ: ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಒತ್ತಾಯಿಸಿ ನಗರದಲ್ಲಿ ನಡೆಯುತ್ತಿರುವ ನಿರಂತರ ಹೋರಾಟ ಸೋಮವಾರ 345ನೇ ದಿನಕ್ಕೆ ಕಾಲಿಟ್ಟಿದ್ದು, ತಾಲ್ಲೂಕಿನ ಕೆಂಬೋಡಿ ಜನತಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಕಾಲೇಜಿನ ವಿದ್ಯಾರ್ಥಿನಿ ಪೂರ್ಣಿಮಾ ಮಾತನಾಡಿ ‘ಗಿಡ–ಮರಗಳನ್ನು ನಾಶಪಡಿಸಿರುವುದರಿಂದ ಇಂದು ಸಕಾಲಕ್ಕೆ ಮಳೆಯಾಗುತ್ತಿಲ್ಲ. ಇದರಿಂದಾಗಿ ಸುಮಾರು ವರ್ಷಗಳಿಂದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಬರಪರಿಸ್ಥಿತಿ ಎದುರಾಗಿದ್ದು, ನಾವೇ ಸೃಷ್ಟಿಸಿಕೊಂಡಿರುವ ಕೃತಕ ದುರಂತವಾಗಿದೆ’ ಎಂದು ಅಂತಕ ವ್ಯಕ್ತಪಡಿಸಿದರು.
‘ಹಿರಿಯರು ಹೇಳುವ ಮಾತುಗಳು ಕೇಳಿದರೆ ಈ ಹಿಂದೆ ಅಷ್ಟೊಂದು ಮಳೆಯಾಗುತ್ತಿತ್ತೆ ಎಂದು ಕಲ್ಪಿಸಿಕೊಳ್ಳಲು ಅಗುತ್ತಿಲ್ಲ. ಈಗ ಮಳೆಗಾಗಿ ಪ್ರಾರ್ಥಿಸಿ ಅನೇಕ ರೀತಿಯ ಪೂಜೆ, ಪ್ರಾರ್ಥನೆಗಳನ್ನು ನಡೆಸಿದರೂ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ನೀರಾವರಿ ಯೋಜನೆ ಕಲ್ಪಿಸಲು ಕ್ರಮ ಕೈಗೊಳ್ಳದೆ ಇರುವುದು ನಾಚಿಕೇಗೇಡಿನ ಸಂಗತಿ’ ಎಂದು ಆರೋಪಿಸಿದರು.
‘ಭೂಮಿಯಲ್ಲಿ ತೇವಾಂಶ ಇಲ್ಲದ ಕಾಡಿನಲ್ಲಿ ಮರಗಳು ಒಣಗುತ್ತಿವೆ. ಇದರಿಂದಾಗಿ ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುತ್ತಿದ್ದು, ಸಾಕು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿವೆ. ಇದರಿಂದಾಗಿ ಸಾರ್ವಜನಿಕರಲ್ಲೂ ಆತಂಕ ಮನೆ ಮಾಡಿದೆ’ ಎಂದರು.
‘ಬಯಲು ಸೀಮೆಯ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಶಕ್ತಿ ಪ್ರದರ್ಶಿಸಿ ಹೋರಾಟ ನಡೆಸಿದಾಗ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತವೆ. ಇಂತಹ ಶಾಂತಿ ಹೋರಾಟಗಳಿಗೆ ಸರ್ಕಾರ ಮಣಿಯುವುದಿಲ್ಲ. ಉಗ್ರ ಹೋರಾಟಗಳನ್ನು ನಡೆಸಬೇಕಾದ ಅಗತ್ಯವಿದೆ’ ಎಂದು ಹೇಳಿದರು.
ಕಾಲೇಜಿನ ಉಪನ್ಯಾಸಕರಾದ ನಾಗೇಶ್, ಕೆ.ಆರ್.ಪ್ರತಿಮಾ, ಅಶ್ವಿನಿ, ವಿದ್ಯಾರ್ಥಿಗಳಾದ ರುಚಿತಾ, ಅಮೃತಾ, ಮೌನಿಕಾ, ಸೌಂದರ್ಯ, ಅನುಷ್ಕಾ, ಹರ್ಷವರ್ಧನ್, ಉದಯ್, ಧನರಾಜ್, ಕಿರಣ್, ನಂದಕುಮಾರ್, ಪ್ರವೀಣ್, ನಾಗವೇಣಿ, ರೇಣುಕಾ ಇದ್ದರು.