ಬಾಗೇಪಲ್ಲಿ: ರೈತರು ಮತ್ತು ಕೃಷಿ ಕಾರ್ಮಿಕರ ಸಾಲ ಮನ್ನಾ ಮಾಡಬೇಕು, ರೈತರ ಬೆಳೆನಷ್ಟ ಪರಿಹಾರವನ್ನು ಎಕರೆಗೆ ₹ 25 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಮತ್ತು ಕಾರ್ಮಿಕರ ಸಂಘಟನೆಯ (ಕೆಪಿಆರ್ಎಸ್ಎನ್) ತಾಲ್ಲೂಕು ಘಟಕದ ಅಧ್ಯಕ್ಷ ಜೆಸಿಬಿ ಮಂಜುನಾಥ ರೆಡ್ಡಿ ಒತ್ತಾಯಿಸಿದರು.
ತಾಲ್ಲೂಕಿನ ಮಿಟ್ಟೇಮರಿಯಲ್ಲಿ ಸಿಪಿಎಂ ಜಿಲ್ಲೆಯಾದ್ಯಂತ ಮಹಾ ಕಾಲ್ನಡಿಗೆ ಜಾಥಾ ಪ್ರಯುಕ್ತ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ವಿತರಿಸಬೇಕು. ಬರಗಾಲದ ದಿನಗಳಲ್ಲಿ ಪ್ರತಿ ಕುಟುಂಬಕ್ಕೆ 35 ಕೆ.ಜಿ ಪಡಿತರ ಆಹಾರ ವಿತರಿಸಬೇಕು ಎಂದು ಆಗ್ರಹಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ. ಮುನಿವೆಂಕಟಪ್ಪ ಮಾತನಾಡಿ, ಉದ್ಯೋಗಖಾತ್ರಿ ಯೋಜನೆಯಡಿ ಕಾರ್ಮಿಕರಿಗೆ 200 ದಿನ ಉದ್ಯೋಗ ನೀಡಬೇಕು. ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡಬೇಕು. ವಿದ್ಯಾರ್ಥಿಗಳ ಶಾಲಾ ಶುಲ್ಕ ಪಾವತಿಗೆ ವಿನಾಯಿತಿ ನೀಡಬೇಕು. ಶಾಲಾ ಮಕ್ಕಳಿಗೆ ಉಚಿತವಾಗಿ ಬಸ್ ಪಾಸ್ ಮತ್ತು ಮಧ್ಯಾಹ್ನದ ಬಿಸಿಯೂಟ ವಿತರಿಸಬೇಕು ಎಂದು ಆಗ್ರಹಿಸಿದರು.
ಸಿಪಿಎಂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗೋಪಿನಾಥ್ ಮಾತನಾಡಿದರು. ತಾಲ್ಲೂಕಿನ ಮಿಟ್ಟೇಮರಿ, ಆಚೇಪಲ್ಲಿ, ಬೂರಗಮಡಗು, ಪಾತಪಾಳ್ಯ ಮತ್ತಿತರರ ಕಡೆ ಮಹಾ ಕಾಲ್ನಡಿಗೆ ಜಾಥಾ ಸಂಚರಿಸಿತು. ರಘುರಾಮರೆಡ್ಡಿ, ರಾಮಲಿಂಗಪ್ಪ, ರಘುರಾಮರೆಡ್ಡಿ, ವಿಶ್ವನಾಥರೆಡ್ಡಿ, ಶ್ರೀನಿವಾಸರೆಡ್ಡಿ ಭಾಗವಹಿಸಿದ್ದರು.