ಕಲಬುರ್ಗಿ: ಗೋವಾ ಹೋಟೆಲ್ ಬಳಿ ಮಂಗಳವಾರ ರಾತ್ರಿ ರೌಡಿ ಶೀಟರ್ ‘7ಸ್ಟಾರ್’ ಪ್ರದೀಪ್ ಗುಂಪಿಗೆ ಸೇರಿದವರು ಎನ್ನಲಾದ ಯುವಕರ ಗುಂಪೊಂದು ಕಾರಿನಲ್ಲಿ ಕುಳಿತಿದ್ದ ಮೂವರು ಯುವಕರ ಮೇಲೆ ಮಾರಕಾಸ್ತ್ರಗಳನ್ನು ಬಳಸಿ ಹಲ್ಲೆ ಮಾಡಿದೆ.
‘ವಿದ್ಯಾನಗರ ಬಡಾವಣೆಯ ಹಡ್ಡಿ ಪಿಂಟೂ ಅಲಿಯಾಸ್ ಚೇತನ್, ಇವರ ಸ್ನೇಹಿತ ನಿತಿನ್ ಗಂಭೀರ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದೆ. ಫಯೂಮ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ಮೂವರೂ ಯುವಕರು ಕಾರಿನಲ್ಲಿ ಕುಳಿತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ 5–6 ಯುವಕರ ಗುಂಪು ಕಾರಿನ ಮೇಲೆ ಕಲ್ಲು ಎತ್ತಿ ಹಾಕಿದೆ. ಅಲ್ಲದೆ ಕಾರಿನ ಗಾಜುಗಳನ್ನು ಪುಡಿ ಮಾಡಿದೆ.
ಭಯ ಭೀತನಾದ ಯುವಕನೊಬ್ಬ ಕಾರಿನಿಂದ ಕೆಳಗಿಳಿದು ಓಡಲು ಯತ್ನಿಸಿದ್ದಾನೆ. ಆತನ ಬೆನ್ನಟ್ಟಿದ ಯುವಕರು ಮನಬಂದಂತೆ ಹಲ್ಲೆ ಮಾಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತಿ ರುವುದನ್ನು ಕಂಡ ಸಾರ್ವಜನಿಕರು ಬೆಚ್ಚಿ ಬಿದ್ದರು.ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ್, ಡಿವೈಎಸ್ಪಿ ಜಾಹ್ನವಿ, ಅಶೋಕ ನಗರ ಇನ್ಸ್ಪೆಕ್ಟರ್ ಜೇಮ್ಸ್ ಮೆನೆಜಿಸ್ ಭೇಟಿ ನೀಡಿದರು. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.