ಗೌರಿಬಿದನೂರು: ತಾಲ್ಲೂಕಿನ ಚಿಕ್ಕ ಕುರುಗೋಡು ಗ್ರಾಮದ ಮೂಲಕ ರಾಮಚಂದ್ರಪುರ ಗ್ರಾಮಕ್ಕೆ ಹೋಗುವ ರೈಲ್ವೆ ಗೇಟ್ ಬಳಿ ನಿರ್ಮಿಸಿರುವ ಕೆಳಸೇತುವೆ ಅವೈಜ್ಞಾನಿಕವಾಗಿದೆ. ಕೆಳಸೇತುವೆಯಲ್ಲಿ ನೀರು ನಿಲ್ಲುವುದರಿಂದ ಸಂಚರಿಸುವ ತೊಂದರೆಯಾಗುತ್ತಿದೆ.
ಮಳೆ ಬಂದರೆ ಕೆಳಸೇತುವೆ ಮಾರ್ಗದಲ್ಲಿ ನೀರು ಹರಿದು ಹೊರ ಹೋಗಲು ವ್ಯವಸ್ಥೆ ಇಲ್ಲ. ಇದರಿಂದಾಗಿ ರಾಮಚಂದ್ರಪುರ, ಬೈಚಾಪುರ ಮೇಳ್ಯಾ ಗ್ರಾಮಗಳಿಗೆ ತೆರಳುವ ಜನರ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಎರಡು ದಿನಗಳ ಹಿಂದೆ ಸುರಿದ ಮಳೆಗೆ ಕೆಳಸೇತುವೆಯಲ್ಲಿ ಐದಾರು ಅಡಿ ನೀರು ನಿಂತಿತ್ತು. ಅದರ ಪರಿಣಾಮ ಈ ರಸ್ತೆ ಬಿಟ್ಟು ಬೈಚಾಪುರ ಕ್ರಾಸ್ ಮೂಲಕ 12 ಕಿ.ಮೀ. ಸುತ್ತಿ ಬಳಸಿ ಗ್ರಾಮಗಳಿಗೆ ಹೋಗಬೇಕಾಯಿತು ಎಂದು ಗ್ರಾಮದ ಮುಖಂಡರಾದ ಹನುಮೇಗೌಡ, ನಂಜೇಗೌಡ ಆರೋಪಿಸಿದರು.
ರೈಲ್ವೆ ಇಲಾಖೆ ನಿರ್ಮಿಸುತ್ತಿರುವ ಕೆಳಸೇತುವೆಗಳು ರೈಲ್ವೆ ಸಂಚಾರಕ್ಕೆ ಅನುಕೂಲವಾಗಿದೆ ಹೊರತು ಸಾರ್ವಜನಿಕರ ಹಿತಕ್ಕೆ ಗಮನ ನೀಡಿಲ್ಲ. ಈಗ ರೈಲ್ವೆ ಗೇಟ್ ಇದ್ದಾಗಿನ ಸಮಸ್ಯೆಗಿಂತ ಹೆಚ್ಚಾಗಿದೆ. ಕೆಳಸೇತುವೆಯಲ್ಲಿ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.