ಬೆಂಗಳೂರು: ಬೈಕ್ ಡಿಕ್ಕಿ ಹೊಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾದಚಾರಿ ಪೊಸ ಮಣಿ (49) ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
‘ಘಟನೆಗೆ ಕಾರಣವಾದ ಬೈಕ್ ಸವಾರ ಜಂಶೀರ್ (30) ಎಂಬಾತನನ್ನು ಉಪ್ಪಾರಪೇಟೆ ಸಂಚಾರ ಪೊಲೀಸರು ಬಂಧಿಸಲಾಗಿದೆ.
ಆರೋಪಿ ಕೇರಳದವನಾಗಿದ್ದು, ಗಾಂಧಿನಗರದ ನ್ಯಾಷನಲ್ ಮಾರುಕಟ್ಟೆಯಲ್ಲಿ ಉಡುಗೊರೆ ಅಂಗಡಿ ಇಟ್ಟುಕೊಂಡಿದ್ದಾರೆ’ ಎಂದು ಉಪ್ಪಾರಪೇಟೆ ಸಂಚಾರ ಪೊಲೀಸರು ತಿಳಿಸಿದರು.
‘ಮಣಿ ತಮಿಳುನಾಡಿನ ತಿರುವಣ್ಣಮಲೈನವರಾಗಿದ್ದು, ಕೆಲ ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಯಡಿಯೂರಿನ ತಂಗಿಯ ಮನೆಯಲ್ಲಿ ವಾಸವಾಗಿದ್ದ ಅವರು ಕಲಾಸಿಪಾಳ್ಯ ಹಾಗೂ ಗಾಂಧಿನಗರದ ಬಾರ್ಗಳಲ್ಲಿ ಖಾಲಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು.
ಮೇ 22ರ ಬೆಳಿಗ್ಗೆ ಗಾಂಧಿನಗರದ 5ನೇ ಮುಖ್ಯರಸ್ತೆಯಲ್ಲಿ ಎಂದಿನಂತೆ ಬಾರ್ವೊಂದರಲ್ಲಿ ಖಾಲಿ ಬಾಟಲಿಗಳ ಸಂಗ್ರಹಕ್ಕೆ ಹೋಗಿದ್ದರು.’
‘ಈ ವೇಳೆ ಬುಲೆಟ್ನಲ್ಲಿ ವೇಗವಾಗಿ ಬಂದ ಜಂಶೀರ್, ಆಟೋ ಹಿಂದಿಕ್ಕಲು ಹೋಗಿ ರಸ್ತೆ ದಾಟುತ್ತಿದ್ದ ಮಣಿ ಅವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿತ್ತು. ರಕ್ತದ ಮಡುವಿನಲ್ಲಿದ್ದ ಅವರನ್ನು ದಿಗ್ವಿಜಯ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಪೊಲೀಸರು ತಿಳಿಸಿದರು.