ವಿಜಯಪುರ: ‘ಶುಭ ಗಳಿಗೆ ನಮ್ಗೆ ಗೊತ್ತಿಲ್ಲ. ಆದ್ರೆ ನಮ್ ಗೌಡ್ರು ಅದನ್ನ ಬಿಡಲ್ಲ. ಇದರಿಂದಲೇ ನಮ್ ಪಟ್ಟಿ ಇನ್ನೂ ಹೊರಬಿದ್ದಿಲ್ಲ...’
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಯಿದು.
‘118 ವಿಧಾನಸಭಾ ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಂಡಿದೆ. ಬಿಡುಗಡೆ ಮಾಡುವಂತೆ ರಾಷ್ಟ್ರೀಯ ಅಧ್ಯಕ್ಷರಿಗೆ ನೀಡಲಾಗಿದೆ. ಆದ್ರೆ ಅವರು ಶುಭ ಮುಹೂರ್ತ ನೋಡ್ತಿದ್ದಾರೆ. ಮುಂಬರುವ ಜೂನ್ 15ರೊಳಗೆ ನಾನು ಈ ಹಿಂದೆ ನೀಡಿದ್ದ ಹೇಳಿಕೆಯಂತೆ ಪಟ್ಟಿ ಪ್ರಕಟಿಸುವರು ಎಂಬ ನಿರೀಕ್ಷೆ ನನ್ನದಾಗಿದೆ’ ಎಂದು ವಿಜಯಪುರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
‘ನಂಗೆ ಈ ಶುಭ ಮುಹೂರ್ತದಲ್ಲಿ ನಂಬಿಕೆಯಿಲ್ಲ. ಗುರುವಾರ ಅಮಾವಾಸ್ಯೆಯಿತ್ತು. ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ದೇವಾನಂದ ಚವ್ಹಾಣ ಅಭ್ಯರ್ಥಿ ಎಂದು ಘೋಷಿಸಿದೆ.ಆದ್ರೆ ನಮ್ ಗೌಡ್ರು ಇದನ್ನ ಒಪ್ಪಲ್ಲ. ಎಲ್ಲವನ್ನೂ ಲೆಕ್ಕಾಚಾರ ಹಾಕಿಯೇ ನಿರ್ಧಾರ ತೆಗೆದುಕೊಳ್ತಾರೆ. ಅದ್ರಿಂದ ನಾವ್ ಏನೂ ಮಾಡಕ್ಕಾಗಲ್ಲ’ ಎನ್ನುತ್ತಿದ್ದಂತೆ ಪತ್ರಿಕಾಗೋಷ್ಠಿ ನಗೆಗಡಲಲ್ಲಿ ತೇಲಿತು.