ರಬಕವಿ– ಬನಹಟ್ಟಿ: ಕೇಂದ್ರ ಸರ್ಕಾರ ಅರ್ಧದಷ್ಟು ಹಣ ನೀಡಿದರೆ ಮುಂಬ ರುವ ದಿನಗಳಲ್ಲಿ ರಾಜ್ಯದ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಅವರು ಭಾನುವಾರ ಸ್ಥಳೀಯ ಜಿಎಲ್ಬಿಸಿ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಸ್ತುತ ವರ್ಷದ ಮುಂಗಡ ಪತ್ರದಲ್ಲಿ ನೂತನ ತಾಲ್ಲೂಕು ಘೋಷಣೆ ಮಾಡ ಲಾಗಿದ್ದು, ಈಗಾಗಲೇ ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸ್ಥಾನಿಕ ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ. ಎರಡು ಮೂರು ತಿಂಗಳಲ್ಲಿ ನೂತನ ತಾಲ್ಲೂಕು ಸ್ಥಾಪನೆ ಮಾಡುವ ಕಾರ್ಯವನ್ನು ಕೈಗೊಳ್ಳಲಾಗು ವುದು ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಮುಖ್ಯಮಂತ್ರಿಗಳು, ಅಧ್ಯಕ್ಷರು ಮತ್ತು ಮುಖ್ಯವಾಗಿ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಈ ಬಾರಿ ಕೂಡಾ ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಉಂಟಾಗಿದೆ. ಬರ ಪರಿಹಾರವನ್ನು ಸರ್ಕಾರ ಯಶಸ್ವಿಯಾಗಿ ನಿರ್ವಹಿಸುತ್ತಿದೆ.
ಈಗಾಗಲೇ ₹ 1200 ಕೋಟಿ ಪರಿಹಾರ ನೀಡಲಾಗಿದೆ. ಇನ್ನೂ ರಾಜ್ಯದ ಐದು ಲಕ್ಷ ಜನರಿಗೆ ಪರಿಹಾರ ಧನ ವಿತರಣೆ ಮಾಡಬೇಕಾಗಿದೆ. ಈಗಾ ಗಲೇ ಬಾಗಲಕೋಟೆ ಜಿಲ್ಲೆಯಲ್ಲಿ 82,664 ರೈತರಿಗೆ ₹49.94 ಕೋಟಿ ಹಣ ನೀಡಲಾಗಿದೆ. ಇನ್ನೂ ಕೆಲವು ರೈತರು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಖಾತೆ ಹೊಂದದೆ ಇರುವುದರಿಂದ ಅವರಿಗೆ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.
ಈ ಹಿಂದೆ ಬೆಳೆ ಪರಿಹಾರ ಹಣವನ್ನು ಜಿಲ್ಲಾಧಿಕಾರಿಗಳ ಮೂಲಕ ನೀಡಲಾಗು ತ್ತಿತ್ತು. ಅನೇಕ ಅವ್ಯವಹಾರಗಳು ನಡೆದ ಕಾರಣದಿಂದಾಗಿ ಈ ಬಾರಿ ಪರಿಹಾರ ವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ನೀಡಲಾಗುವುದು. ಈ ಯೋಜನೆಯನ್ನು ರಾಷ್ಟ್ರದಲ್ಲಿ ಪ್ರಥಮ ಬಾರಿಗೆ ರಾಜ್ಯದಲ್ಲಿ ಜಾರಿಗೆ ತರಲಾಗಿದೆ ಎಂದರು.
ಫಸಲ್ ಬಿಮಾ ಯೋಜನೆ ಅಡಿ ಯಲ್ಲಿ ಮುಂಗಾರಿನಲ್ಲಿ 41,711 ಜನ ರಿಗೆ ವಿಮೆ ಆಗಿದ್ದು, ಅವರ ಪ್ರಿಮಿಯಂ ₹ 6.18 ಕೋಟಿ ಮತ್ತು ಹಿಂಗಾರಿನಲ್ಲಿ 1,34,000 ರೈತರು ಇದ್ದಾರೆ. ₹ 7.93 ಕೋಟಿ ಆಗಿದೆ. ಈ ಹಣ ಪಾವತಿ ಯಾಗಿಲ್ಲ. ಹಿಂಗಾರು ಬೆಳೆ ಹಾನಿ ಪರಿ ಹಾರ ಧನ ಇನ್ನೂ ಕೇಂದ್ರ ಸರ್ಕಾರದಿಂದ ಬಂದಿಲ್ಲ.
ಒಂದೆರಡು ದಿನಗಳಲ್ಲಿ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ, ಜಿಲ್ಲಾಧಿಕಾರಿ ಪಿ.ಎ.ಮೇಘನ್ನವರ, ಜಮಖಂಡಿ ಉಪವಿಭಾಗಾಧಿಕಾರಿ ರವೀಂದ್ರ ಕರಿಲಿಂಗಣ್ಣವರ ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.