ಭಾರತದ ರಾಜತಾಂತ್ರಿಕರ ಮೇಲೆ ಹಲ್ಲೆ: ಪೀಕಿಂಗ್ ವಿಮಾನ ನಿಲ್ದಾಣದಲ್ಲಿ ರೆಡ್ಗಾರ್ಡ್ಗಳ ಅಸಭ್ಯ ಹಿಂಸಾಕೃತ್ಯಗಳು
ಪೀಕಿಂಗ್, ಜೂನ್ 14– ಗೂಢಚರ್ಯದ ಆಪಾದನೆ ಮೇಲೆ ಉಚ್ಚಾಟನೆ ಮಾಡಲಾಗಿರುವ ಭಾರತದ ರಾಜತಾಂತ್ರಿಕರಿಬ್ಬರು ಇಂದು ಇಲ್ಲಿಂದ ಹಾಂಕಾಂಗ್ಗೆ ತೆರಳುವ ಮುನ್ನ ಪೀಕಿಂಗ್ ವಿಮಾನ ನಿಲ್ದಾಣದಲ್ಲಿ ರೆಡ್ಗಾರ್ಡ್ಗಳು ಗಲಭೆ ನಡೆಸಿ ಥಳಿಸಿ, ಒದ್ದರು.
ನೂರಾರು ಮಂದಿ ರೆಡ್ಗಾರ್ಡ್ಗಳ ಸಮೂಹವು ಭಾರತದ ರಾಯಭಾರಿ ಕಚೇರಿಯ ಎರಡನೆಯ ಕಾರ್ಯದರ್ಶಿ ಕೃಷ್ಣನ್ ರಘುನಾಥ್ ಹಾಗೂ ಮೂರನೆಯ ಕಾರ್ಯದರ್ಶಿ ಪಿ. ವಿಜಯ್ ಅವರ ಕತ್ತು ಹಿಡಿದು, ಎಳೆದು ತಳ್ಳಿತು.
ಮಾವೊತ್ಸೆತುಂಗ್ ಅವರ ಉಲ್ಲೇಖಗಳಿರುವ ಕೆಂಪು ಪುಸ್ತಕಗಳನ್ನು ಅವರತ್ತ ಬೀಸುತ್ತ ರೆಡ್ಗಾರ್ಡ್ಗಳು ಅವರನ್ನು ಗುದ್ದಿ, ಒದ್ದರು.
ಅರಾಜಕತೆ ತಡೆಗಟ್ಟಲು ಅಗತ್ಯವಾದರೆ ಗುಂಡು ಹಾರಿಸಲು ಆಜ್ಞೆ
ಕಲ್ಕತ್ತ, ಜೂ. 14– ಡಾರ್ಜಿಲಿಂಗ್ ಜಿಲ್ಲೆಯಲ್ಲಿಯ ನಕ್ಸಲ್ಬಾರಿ ಪ್ರದೇಶದಲ್ಲಿ ಅರಾಜಕತೆಯನ್ನು ತಡೆಗಟ್ಟುವುದಕ್ಕಾಗಿ ಅಗತ್ಯ ಬಿದ್ದರೆ, ಗುಂಡು ಹಾರಿಸುವಂತೆ ಪೋಲೀಸಿನವರಿಗೆ ಆಜ್ಞೆ ಕೊಡಲಾಗಿದೆಯೆಂದು ಇಂದು ಇಲ್ಲಿ ಅಧಿಕೃತವಾಗಿ ತಿಳಿದು ಬಂದಿದೆ.
ಅಲ್ಲಿಯ ಪರಿಸ್ಥಿತಿಯನ್ನು ಎದುರಿಸಲು ಸ್ಥಳದಲ್ಲಿಯೇ ತೀರ್ಮಾನ ಕೈಗೊಳ್ಳುವಂಥ ಪೂರ್ಣ ಅಧಿಕಾರ ಹೊಂದಿರುವ ರಾಜ್ಯ ಸಂಪುಟ ತಂಡವು ನಿನ್ನೆ ಈ ನಿರ್ಧಾರ ಕೈಗೊಂಡಿತು.
‘ಆಯಕಟ್ಟಿನ ಪ್ರದೇಶವಾದ’ ನಕ್ಸಲ್ಬಾರಿ ಪ್ರದೇಶದಲ್ಲಿ ಅರಾಜಕತೆ ಎಂದು ಚವಾಣ್
ನವದೆಹಲಿ, ಜೂನ್ 14– ಉತ್ತರ ಬಂಗಾಳದ ನಕ್ಸಲ್ಬಾರಿಯಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿಯ ಪರಿಶೀಲನೆಗಾಗಿ ಪಶ್ಚಿಮ ಬಂಗಾಳದ ಆರು ಮಂದಿ ಸಚಿವರು ಅಲ್ಲಿಗೆ ಹೋಗಿರುವ ಈ ಸಮಯದಲ್ಲಿ ‘ಪಶ್ಚಿಮ ಬಂಗಾಳದ ಸರ್ಕಾರದ ಬಗ್ಗೆ ನಿರ್ಧಾರಕ್ಕೆ ಬರಲು ನನಗೆ ಇಷ್ಟವಿಲ್ಲ’ ಎಂದು ಗೃಹ ಸಚಿವ ಶ್ರೀ ವೈ.ಬಿ. ಚವಾಣರು ಇಂದು ರಾಜ್ಯಸಭೆಯಲ್ಲಿ ನುಡಿದರು.
ನಕ್ಸಲ್ಬಾರಿಗೆ ಪಾರ್ಲಿಮೆಂಟ್ ನಿಯೋಗ ಕಳುಹಿಸದಿರಲು ಒತ್ತಾಯ
ನವದೆಹಲಿ, ಜೂ. 14– ಪಶ್ಚಿಮ ಬಂಗಾಳದಲ್ಲಿಯ ನಕ್ಸಲ್ಬಾರಿಗೆ ಪಾರ್ಲಿಮೆಂಟರಿ ನಿಯೋಗವೊಂದನ್ನು ಕಳುಹಿಸುವುದನ್ನು ಕೈಬಿಡಬೇಕೆಂದು ಪಾರ್ಲಿಮೆಂಟಿನ ವಿರೋಧ ಪಕ್ಷದ ನಾಲ್ವರು ಪ್ರಧಾನಿ ಮತ್ತು ಲೋಕಸಭೆಯ ಅಧ್ಯಕ್ಷರನ್ನು ಒತ್ತಾಯಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.