ವಿಜಯಪುರ: ‘ಸಾಮಾಜಿಕ ನ್ಯಾಯಕ್ಕಾಗಿ 12ನೇ ಶತಮಾನದಲ್ಲಿ ಬಸವೇಶ್ವರರು ಶಿವಶರಣರ ಚಳವಳಿ ಮೂಲಕ ಹೋರಾಟ ನಡೆಸಿದರೆ, 21ನೇ ಶತಮಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಚಳವಳಿ ನಡೆಸಿದರು. ಈ ಇಬ್ಬರ ಹೋರಾಟ ನಡೆದಿದ್ದು ಮಾತ್ರ ಶೋಷಿತರ ಉದ್ಧಾರಕ್ಕಾಗಿ...’
ಈಚೆಗೆ ವಿಜಯಪುರದಲ್ಲಿ ನಡೆದ ‘ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ’ ನಾಮಕರಣ ಸಮಾರಂಭದಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಆಶೀರ್ವಚನ ನೀಡುವಾಗ ನುಡಿದ ಅಣಿಮುತ್ತುಗಳಿವು.
‘ಸಿದ್ದರಾಮಯ್ಯ ಅಹಿಂದ ಚಳವಳಿ ಆರಂಭಿಸಿದಾಗ ಎಲ್ಲ ಸ್ವಾಮೀಜಿಗಳು ಕೈಕೊಟ್ಟರು. ಕುಲಬಾಂಧವರ ಆಕ್ಷೇಪಣೆ ನಡುವೆಯೂ ಕೊನೆವರೆಗೂ ಜತೆಯಲ್ಲಿದ್ದವ ನಾನು ಮಾತ್ರ...
ನಾನು ಬೆಂಬಲಿಸಿದ್ದು ಸಿದ್ದರಾಮಯ್ಯ ಬಸವ ಅನುಯಾಯಿ ಎಂದು. ನಾ ಹೇಳಿದ್ದು ನಿಮಗೆ ಅರ್ಥವಾಯ್ತಾ ಎಂ.ಬಿ.ಪಾಟೀಲರೇ, ಈಶ್ವರ ಖಂಡ್ರೇಯವರೇ...’ ಎಂದು ಮುರುಘಾ ಶರಣರು ತಮ್ಮ ಆಶೀರ್ವಚನದುದ್ದಕ್ಕೂ ಮುಖ್ಯಮಂತ್ರಿಯ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಕೊಂಡಾಡಿದರು.
ಈ ಹೊಗಳಿಕೆಯ ನಡುವೆ ‘ನಾವು ಎಂದೂ ಅಧಿಕಾರಸ್ಥರ ತುತ್ತೂರಿಯಲ್ಲ. ಹಾಗಂತ ಒಳ್ಳೆಯ ಕೆಲಸವನ್ನು ಹೊಗಳುವುದು ತಪ್ಪಲ್ಲ’ ಎನ್ನುವ ಮೂಲಕ ಶರಣರು ತಮ್ಮ ಮಾತುಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ‘ಅಕ್ಕ’ನ ಅಭಿಮಾನಿಗಳು ಮಾತ್ರ ‘ಶರಣರ ಹೊಗಳಿಕೆ ಅತಿಯಾಯ್ತು’ ಎಂದು ತಮ್ಮಲ್ಲೇ ಮುಗುಳ್ನಕ್ಕರು.