ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಗಳು ಬದುಕಿನ ಪದ್ಧತಿಯಾಗಲಿ

ಸ್ವಾತಂತ್ರ್ಯ ಸೇನಾನಿ ಮುರುಡಿ ಭೀಮಜ್ಜ ಪುಣ್ಯತಿಥಿಯಲ್ಲಿ ಸಿಂಧ್ಯಾ ಅಭಿಮತ
Last Updated 13 ಜುಲೈ 2017, 7:01 IST
ಅಕ್ಷರ ಗಾತ್ರ

ಕುಷ್ಟಗಿ: ನಮ್ಮ ಸಂಸ್ಕೃತಿ, ಪರಂಪರೆ, ಮೌಲ್ಯಗಳನ್ನು ನಾವು ಮರೆಯುತ್ತಿದ್ದೇವೆ ಎಂದು ಮಾಜಿ ಸಚಿವ ಪಿಜಿಆರ್‌ ಸಿಂಧ್ಯಾ ಹೇಳಿದರು. ಇಲ್ಲಿಯ ಮುರುಡಿ ಭೀಮಜ್ಜ ಪ್ರತಿಷ್ಠಾನದ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಭೀಮಜ್ಜ ಅವರ 61ನೆ ಪುಣ್ಯತಿಥಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಪುಂಡಲೀಕಪ್ಪ ಜ್ಞಾನಮೋಟೆ ಅವರ 4ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭೀಮಜ್ಜ ಅವರ  ಕುರಿತ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಗುರುಗಳು, ಹಿರಿಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿಯಾಗಿದೆ. ಮೌಲ್ಯಗಳು ಕೇವಲ ಮಾತಿಗೆ ಸೀಮಿತವಾಗದೆ ಅವು ಜೀವನದ ಪದ್ಧತಿಯಾಗಬೇಕು’ ಎಂದರು.

‘ಜಾತಿಮತ ಭೇದವಿಲ್ಲದೆ ಅದ್ವೈತ ಸಿದ್ಧಾಂತದ ಮಾದರಿಯಲ್ಲಿ ಸ್ವಾತಂತ್ರ್ಯ ಹೋರಾಟ ಸೇನಾನಿಗಳಿಗೆ ಮತ್ತು ಜನಾಂದೋಲನಕ್ಕೆ ಆಧ್ಯಾತ್ಮಿಕ ಪ್ರೇರಣೆ ನೀಡಿದ್ದ ಭೀಮಜ್ಜನವರದು ಜಾತ್ಯತೀತ ಮನೋಭಾವ.

ಭೀಮಜ್ಜ ಅವರ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯ  ಚಳವಳಿಯ ಮುಂದಾಳತ್ವ ವಹಿಸಿ, ಎರಡು ಬಾರಿ ಶಾಸಕರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಪುಂಡಲೀಕಪ್ಪ ಜ್ಞಾನಮೋಟೆ ಮನಸ್ಸು ಮಾಡಿದ್ದರೆ ಅಧಿಕಾರದಲ್ಲಿದ್ದಾಗ ಏನನ್ನಾದರೂ ಗಳಿಸಬಹುದಿತ್ತು. ಆದರೆ, ಅವರು ಸರಳತೆ,  ಪ್ರಾಮಾಣಿಕತೆಯಿಂದ ನಡೆದುಕೊಂಡರು. ಇಂಥವರು ಇನ್ನೂ ಇದ್ದು, ಅವರನ್ನು ಗುರುತಿಸಿ ಆಯ್ಕೆ ಮಾಡುವುದು ಜನರ  ಧರ್ಮ’ ಎಂದು ಅಭಿಪ್ರಾಯಪಟ್ಟರು.

ಸಾನ್ನಿಧ್ಯ ವಹಿಸಿದ್ದ ನಾಮದೇವಾನಂದ ಭಾರತಿ ಸ್ವಾಮೀಜಿ,  ‘ಪುಂಡಲೀಕಪ್ಪ ಜ್ಞಾನಮೋಟೆ ಅವರ ಜೀವನ, ಯಶೋಗಾಥೆಯನ್ನು ಭವಿಷ್ಯದ ಪೀಳಿಗೆಗೆ ತಿಳಿಸುವ ಪ್ರಯತ್ನ ನಡೆಯಬೇಕು. ಆದರೆ, ಅವರ ಹೆಸರಿನಲ್ಲಿ ಒಂದು ವೃತ್ತವೂ ಪಟ್ಟಣದಲ್ಲಿ ಇಲ್ಲ. ಈ ಬಗ್ಗೆ ಅನೇಕ ವರ್ಷಗಳಿಂದ ಹೇಳುತ್ತಾ ಬಂದರೂ ಯಾರೂ ಗಮನಹರಿಸುತ್ತಿಲ್ಲ’ ಎಂದರು.
ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ‘ಪುಂಡಲೀಕಪ್ಪ ಅವರ ಜೀವನ, ಸಾಧನೆ ಕುರಿತ ಪುಸ್ತಕ ಪ್ರಕಟಿಸಿ ವಿಧಾನಸಭೆ  ಗ್ರಂಥಾಲಯದಲ್ಲಿರಿಸಲು ಪ್ರಯತ್ನಿಸುವುದಾಗಿ’ ಹೇಳಿದರು.

ಅಮೃತರಾಜ್ ಜ್ಞಾನಮೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಂಡುರಂಗ ಜ್ಞಾನಮೋಟೆ ಅವರ ಸ್ಮರಣಾರ್ಥ  ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.

ಇಳಕಲ್‌ನ ಡಾ.ವಿಜಯಮಹಾಂತ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಕೆ.ಶರಣಪ್ಪ,  ಸ್ವಾತಂತ್ರ್ಯ ಹೋರಾಟಗಾರ ಬಿ.ಕಿಶನ್‌ರಾವ್‌, ‘ಕ್ರಾಂತದರ್ಶಿ ಪರಮ ತಪಸ್ವಿ ಮುರುಡಿ ಭೀಮಜ್ಜ’ ಕೃತಿ ಲೇಖಕ ರಾಮಣ್ಣ ಹವಳೆ, ಸ್ವಾತಂತ್ರ್ಯ ಹೋರಾಟಗಾರ ಎನ್‌.ನರಸಿಂಗರಾವ್‌, ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಶಿವಪ್ಪ ನೀರಾವರಿ, ಪುಸ್ತಕ ಪ್ರಕಟಣೆ ದಾನಿ ದೇವೇಂದ್ರಪ್ಪ ಬಳೂಟಗಿ  ಇದ್ದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಟರಾಜ ಸೋನಾರ ಸ್ವಾಗತಿಸಿ, ಎ.ವೈ.ಲೋಕರೆ ನಿರೂಪಿಸಿದರು.

ಮೆರವಣಿಗೆ:  ಬೆಳಿಗ್ಗೆ ಜ್ಞಾನಮೋಟೆ ಅವರ ನಿವಾಸದಲ್ಲಿ ಬಳ್ಳಾರಿಯ ಪಾಂಡುರಂಗ ಭಜನಾ ಮಂಡಳಿ ಸದಸ್ಯರಿಂದ ಭಜನೆ, ಎಸ್‌.ಎಸ್‌.ಹಿರೇಮಠ ಅವರಿಂದ ಸಂಗೀತ ಸೇವೆ ನಡೆಯಿತು. ಪ್ರಮುಖ ಬೀದಿಗಳಲ್ಲಿ  ಮುರುಡಿ ಭೀಮಜ್ಜ ಅವರ ಭಾವಚಿತ್ರ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT