ರಾಮನಗರ: ತಾಲ್ಲೂಕಿನ ಕುಡಿಹಾಳ–ಕರೇನಹಳ್ಳಿ ಗ್ರಾಮದ ಬಳಿಯ ವೆಂಕಟೇಶ್ವರ ಜಲ್ಲಿ ಕ್ರಷರ್ ಘಟಕದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಅಪಾರ ಪ್ರಮಾಣದ ಸ್ಫೋಟಕ ಸಾಮಗ್ರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬುಧವಾರ ಮಧ್ಯರಾತ್ರಿ 12.30ರ ಸುಮಾರಿಗೆ ಕೇರಳದ ವಯನಾಡು ಜಿಲ್ಲೆಯ ಸುಲ್ತಾನ್ ಬತೇರಿ ಠಾಣೆ ಪೊಲೀಸರು ಹಾಗೂ ಬಿಡದಿ ಠಾಣೆ ಪೊಲೀಸರು ಕ್ರಷರ್ ಘಟಕದ ಮೇಲೆ ಜಂಟಿಯಾಗಿ ದಾಳಿ ನಡೆಸಿದರು.
ಈ ಸಂದರ್ಭ ಒಟ್ಟು 273 ಬಾಕ್ಸ್ ನಷ್ಟು ಅಮೋನಿಯಂ ನೈಟ್ರೇಟ್, ಡಿಟನೇಟರ್, ಜಿಲೇಟಿನ್ ಕಡ್ಡಿ, ಸೇಫ್ಟಿ ಫ್ಯೂಸಸ್, ಫ್ಯೂಸ್ ವೈರ್ ಮೊದಲಾದ ಸಾಮಗ್ರಿ ಪತ್ತೆಯಾದವು ಪೊಲೀಸರು ತಿಳಿಸಿದರು. ಜಲ್ಲಿ ಕ್ರಷರ್ ಮಾಲೀಕ ಶ್ರೀರಾಮ್ ಎಂಬುವರು ಪರಾರಿಯಾಗಿದ್ದು, ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈರುಳ್ಳಿ ಟ್ರಕ್ನಲ್ಲಿ ಸಾಗಣೆ: ಕಳೆದ ಜುಲೈ 6 ರಂದು ಕೇರಳ–ಕರ್ನಾಟಕ ಗಡಿ ಭಾಗದಲ್ಲಿ ಈರುಳ್ಳಿ ಸಾಗಿಸುತ್ತಿದ್ದ ಟ್ರಕ್ ಅನ್ನು ಸುಲ್ತಾನ್ ಬತೇರಿ ಠಾಣೆ ಪೊಲೀಸರು ತಪಾಸಣೆ ನಡೆಸಿದ್ದರು, ಈ ಸಂದರ್ಭ ಅವರಿಗೆ 198 ಜಿಲೆನಿಟ್ ಕಡ್ಡಿ, 20 ಬಾಕ್ಸ್ ಡಿಟನೇಟರ್, 100 ಬ್ಯಾಗ್ ಅಮೋನಿಯಂ ನೈಟ್ರೇಟ್ ಪತ್ತೆಯಾಗಿತ್ತು.
ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭ ಬೆಂಗಳೂರು ಮೂಲಕ ಕೇರಳಕ್ಕೆ ಸ್ಫೋಟಕ ಸಾಮಗ್ರಿ ಗಳನ್ನು ಸಾಗಣೆ ಮಾಡುತ್ತಿ ದುದಾಗಿ ಆರೋಪಿ ಗಳು ಸುಳಿವು ನೀಡಿದ್ದರು.
ಆಮಾಹಿತಿ ಆಧರಿಸಿ ಬುಧವಾರ ರಾತ್ರಿ ಪೊಲೀಸರು ಜಂಟಿ ಕಾರ್ಯಾ ಚರಣೆ ನಡೆಸಿ ಅಪಾರ ಪ್ರಮಾಣದ ಸ್ಫೋಟಕ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.
‘ಕ್ರಷರ್ಗಳಲ್ಲಿ ಪರವಾನಗಿ ಪಡೆದು ನಿರ್ದಿಷ್ಟ ಪ್ರಮಾಣದ ಸ್ಫೋಟಕಗಳನ್ನು ಸಂಗ್ರಹಿಸಲು ಮಾತ್ರ ಅವಕಾಶವಿದೆ. ಆದರೆ ಯಾವುದೇ ಪರವಾನಗಿ ಇಲ್ಲದೆ ಇಷ್ಟು ಪ್ರಮಾಣದಲ್ಲಿ ಇವುಗಳನ್ನು ಸಂಗ್ರಹ ಮಾಡುವಂತಿಲ್ಲ.
ಅವರು ಇದನ್ನು ಕೇವಲ ಕ್ರಷರ್ ಘಟಕಗಳಿಗೆ ಬಳಸುತ್ತಿದ್ದರೋ ಇಲ್ಲ ಅನ್ಯ ಕಾರ್ಯಗಳಿಗಾಗಿ ಬಳಸಲಾಗುತಿತ್ತೋ ಎಂಬುದು ತಿಳಿಯಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
* *
ಒಟ್ಟು 273 ಬಾಕ್ಸ್ನಷ್ಟು ಸ್ಫೋಟಕ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ. ಮುಂದಿನ ತನಿಖೆಯ ನಂತರವಷ್ಟೇ ಈ ಜಾಲದ ಬಗ್ಗೆ ತಿಳಿಯಲಿದೆ
ಬಿ. ರಮೇಶ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.