ಹುಬ್ಬಳ್ಳಿ: ನಗರದಲ್ಲಿ ಮಂಗಳವಾರ ದಿನವಿಡೀ ಸುರಿದ ಮಳೆಯಿಂದ ಈ ಋತುಮಾನದಲ್ಲಿ ಮೊದಲ ಬಾರಿಗೆ ಮಳೆಗಾಲದ ಅನುಭವವಾಯಿತು. ರಸ್ತೆಯೇ ಒದ್ದೆಯಾಗದಂತೆ ಬೀಳುತ್ತಿದ್ದ ಮಳೆಗಿಂತ, ಮಂಗಳವಾರ ಆಗಮಿಸಿದ ವರುಣನಿಂದಾಗಿ ರೈತ ಸಮುದಾಯದಲ್ಲಿ ಸಂತಸ ಮೂಡಿತು.
ಮೋಡ ಕವಿದ ವಾತಾವರಣ ಇದ್ದುದರಿಂದ ಸೂರ್ಯನ ಕಿರಣಗಳು ಅಪರೂಪವಾಗಿದ್ದವು. ಬೆಳಿಗ್ಗೆಯಿಂದಲೇ ಜಿಟಿಜಿಟಿ ಮಳೆ ಸುರಿಯುತ್ತಲೇ ಇತ್ತು. ತಾಸು, ಎರಡು ತಾಸುಗಳಿಗೊಮ್ಮೆ ಬಿರುಸಿ ನಿಂದಲೂ ಸುರಿಯಿತು. ಮಳೆಗಾಲ ಆರಂಭವಾದ ನಂತರ, ಇದೇ ಮೊದಲ ಬಾರಿಗೆ ಬಿಡುವು ಕೊಡದೆ ಮಳೆ ಬಂದಿ ದ್ದರಿಂದ ರಸ್ತೆಯಲ್ಲಿ ನೀರು ಹರಿಯಿತು.
ನಿರಂತರವಾಗಿ ಮಳೆ ಸುರಿದಿದ್ದರಿಂದ, ಸಾರ್ವಜನಿಕರು ತೋಯಿಸಿ ಕೊಳ್ಳುತ್ತಲೇ ಓಡಾಡಬೇಕಾಯಿತು. ಅನಿವಾರ್ಯವಾಗಿ ಜನರು ಕೊಡೆ ಮತ್ತು ಜರ್ಕಿನ್ಗಳ ಮೊರೆಹೋದರು. ಆನಂದ ನಗರ, ಅರವಿಂದ ನಗರ ದಂತಹ ತಗ್ಗು ಪ್ರದೇಶಗಳಲ್ಲಿ ಮನೆಗಳ ಮುಂದೆ ಹೆಚ್ಚು ನೀರು ನಿಂತಿತು. ಆದರೆ, ಗುಡುಗು–ಸಿಡಿಲಿನ ಆರ್ಭಟವಿರಲಿಲ್ಲ. ಗಾಳಿಯೂ ಹೆಚ್ಚು ಜೋರಾಗಿ ಬೀಸಲಿಲ್ಲ. ಹಾಗಾಗಿ, ಯಾವುದೇ ಅನಾಹುತ ಸಂಭವಿಸಿದ ವರದಿಯಾಗಿಲ್ಲ.
ಸಂಚಾರ ದಟ್ಟಣೆ: ಪಿ.ಬಿ. ರಸ್ತೆಯಲ್ಲಿ ಬಿ.ಆರ್.ಟಿ.ಎಸ್ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿದೆ. ಇಳಿಜಾರಿನ ಪ್ರದೇಶ ಗಳಲ್ಲಿ ನೀರು ಸಂಗ್ರಹವಾಯಿತು. ಸ್ಕೂಟಿ, ಸ್ಕೂಟರ್ಗಳು ನೀರಿನಲ್ಲಿ ಚಲಿಸಲಾಗದೆ ನಿಂತಿದ್ದರಿಂದ ಸಂಚಾರದಟ್ಟಣೆಯೂ ಉಂಟಾಯಿತು. ಚನ್ನಮ್ಮ ವೃತ್ತ, ಕೋರ್ಟ್ ವೃತ್ತ ಹಾಗೂ ಹಳೆಯ ಬಸ್ ನಿಲ್ದಾಣದ ಮುಂಭಾಗ ಸಂಚಾರ ದಟ್ಟಣೆ ಉಂಟಾಯಿತು. ವಿದ್ಯಾನಗರದಲ್ಲಿಯೂ ವಾಹನಗಳು ಸಾಲುಗಟ್ಟಿದ್ದವು. ಸಂಚಾರ ಸುಗಮಗೊಳಿಸಲು ಪೊಲೀಸರು ಸಾಹಸ ಪಡುತ್ತಿರುವುದು ಸಾಮಾನ್ಯವಾಗಿತ್ತು.
ಕುಂದಗೋಳ ವರದಿ: ಕುಂದಗೋಳ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಕೆಲವು ಗ್ರಾಮಗಳಲ್ಲಿ ಮಂಗಳವಾರ ದಿಂದ ಜಡಿ ಮಳೆ ಆರಂಭವಾಗಿದೆ. ಬೆಳಿಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ ಇತ್ತು.
ಮಧ್ಯಾಹ್ನ 12 ಗಂಟೆಯ ನಂತರ ಕುಂದಗೋಳ, ಶಿರೂರ, ದೇವನೂರ, ಹಿರೇನರ್ತಿ, ಬೆನಕನಹಳ್ಳಿ, ಕಡಪಟ್ಟಿ, ಅಲ್ಲಾಪೂರ, ಬಿಳೇಬಾಳ, ಕುಬಿಹಾಳ, ಕಮಡೊಳ್ಳಿ ಮತ್ತಿರ ಗ್ರಾಮಗಳಲ್ಲಿ ಆರಂಭವಾಗಿದೆ. ಜಿಟಿ ಜಿಟಿ ಮಳೆ ಆಗುತ್ತಿರುವುದ ರಿಂದ ಈಗಾಗಲೇ ಬಿತ್ತನೆ ಮಾಡಿದ ಕೆಲವು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಬಿತ್ತನೆ ಮಾಡದೇ ಇರುವ ರೈತರು ಮೆಣಸಿನ ನಾಟಿ ಮಾಡಲು ಈ ಮಳೆ ಅನುಕೂಲವಾಗಬಹುದೆಂದು ಸಸಿ ನಾಟಿ ಮಾಡುವ ಸಲಕರಣೆಗಳನ್ನು ಸಜ್ಜು ಗೊಳಿಸುತ್ತಿರುವುದು ಕಂಡು ಬಂದಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.