ಬೆಂಗಳೂರು: ಜೂನ್ಗೆ ಕೊನೆಗೊಂಡ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್–ಜೂನ್) ಕೆನರಾ ಬ್ಯಾಂಕ್ ₹252 ಕೋಟಿ ನಿವ್ವಳ ಲಾಭ ಗಳಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ₹229 ಕೋಟಿ ನಿವ್ವಳ ಲಾಭಗಳಿಸಿದ್ದ ಬ್ಯಾಂಕ್ ಈ ಬಾರಿ ಶೇ 9.90ರಷ್ಟು ಹೆಚ್ಚಳ ಕಂಡಿದೆ.
‘ಬ್ಯಾಂಕ್ ಒಟ್ಟು ₹ 2,472 ಕೋಟಿ ಲಾಭಗಳಿಸುವ ಮೂಲಕ ಶೇ 36ರಷ್ಟು ಬೆಳವಣಿಗೆ ಸಾಧಿಸಿದೆ’ ಎಂದು ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶರ್ಮಾ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್ನ ಒಟ್ಟು ಲಾಭ ₹1,819 ಕೋಟಿಗಳಿಷ್ಟಿತ್ತು.
‘ಠೇವಣಿಗಳ ಮೇಲಿನ ದರ ಇಳಿಕೆ, ಮುಂಗಡ ಠೇವಣಿಗಳ ಅನುಪಾತ ಸುಧಾರಣೆ, ಬಡ್ಡಿಯೇತರ ಆದಾಯದಲ್ಲಿ ಉತ್ತಮ ಪ್ರಗತಿಯು ಬ್ಯಾಂಕ್ ಉತ್ತಮ ಸಾಧನೆಗೆ ಕಾರಣವಾಗಿವೆ’ ಎಂದರು.
‘ಪ್ರಸಕ್ತ ಹಣಕಾಸು ವರ್ಷವನ್ನು ಸಾಲ ವಸೂಲಾತಿ ಮತ್ತು ಅಭಿವೃದ್ಧಿ ವರ್ಷ ಎಂದು ಘೋಷಿಸಿರುವ ಬ್ಯಾಂಕ್, ವಸೂಲಾಗದ ಸಾಲ (ಎನ್ಪಿಎ) ನಿಯಂತ್ರಣಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಲಿದೆ.
‘ಮೊದಲ ತ್ರೈಮಾಸಿಕದಲ್ಲಿ ₹1,331 ಕೋಟಿ ನಗದು ವಸೂಲಾತಿ ಮಾಡಲಾಗಿದೆ. ನಿವ್ವಳ ವಸೂಲಾಗದ ಸಾಲದ ಪ್ರಮಾಣ ಶೇ 7.09ಕ್ಕೆ ಏರಿಕೆಯಾಗಿದ್ದು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ 6ಕ್ಕೆ ಇಳಿಸುವ ವಿಶ್ವಾಸವಿದೆ’ ಎಂದರು.
ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ವಿ. ಭಾರತಿ, ಮುಖ್ಯ ಹಣಕಾಸು ಅಧಿಕಾರಿ ಎನ್.ಸೆಲ್ವರಾಜ್, ಮಹಾ ಪ್ರಬಂಧಕ ಎಸ್. ಎ. ಕಡೂರು ಸುದ್ದಿಗೋಷ್ಠಿಯಲ್ಲಿದ್ದರು.