ಮಳವಳ್ಳಿ: ಕೇಂದ್ರ ಸರ್ಕಾರದ ಮುದ್ರಾ ಯೋಜನೆ, ಆರ್.ಬಿ.ಐ ನಿರ್ದೇಶನದಂತೆ ₹ 1 ಲಕ್ಷದವರೆಗೆ ಭದ್ರತಾ ರಹಿತ ಸಾಲ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರು ತಾಲ್ಲೂಕಿನ ಹಾಡ್ಲಿ –ಮೇಗಳಪುರ ವೃತ್ತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಲುಮೆದೊಡ್ಡಿ, ಅಪ್ಪಾಜಯ್ಯನದೊಡ್ಡಿ, ಸಿದ್ದಾಪುರ, ಹುಚ್ಚೇಗೌಡನದೊಡ್ಡಿ ಗ್ರಾಮದ ನೂರಾರು ಕೃಷಿ ಕೂಲಿಕಾರರು ಮೆರವಣಿಗೆಯ ಮೂಲಕ ವಿವಿಧ ಘೋಷಣೆಗಳೊಂದಿಗೆ ಬ್ಯಾಂಕ್ ಆವರಣಕ್ಕೆ ತೆರಳಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಪುಟ್ಟಮಾದು ಮಾತನಾಡಿ, ‘ಶ್ರೀಮಂತರಿಗೆ ಸುಲಭವಾಗಿ ಸಿಗುವಂತಹ ಸಾಲಗಳು ಕೃಷಿ ಕೂಲಿಕಾರರಿಗೆ ಸಿಗುತ್ತಿಲ್ಲ, ಆರ್.ಬಿ.ಐ ನಿರ್ದೇಶನದಂತೆ ನೀಡಬೇಕಿದ್ದ ಸಾಲದಲ್ಲಿ ಬ್ಯಾಂಕುಗಳು ಶೇ 50ರಷ್ಟನ್ನೂ ನೀಡಿಲ್ಲ. ಶ್ರೀಮಂತರಿಗೆ ಕೊಟ್ಟ ಹಣವೂ ವಾಪಸ್ ಬಂದಿಲ್ಲ. ಬ್ಯಾಂಕುಗಳು ಉಳ್ಳವರ ಪರವಾಗಿ ಕೆಲಸ ಮಾಡುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಜೀವನ ನಡೆಸಲು ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ. ಜೀವನೋಪಾಯಕ್ಕಾಗಿ ಹಸು, ಕುರಿ, ಕೋಳಿ, ಎಮ್ಮೆ, ಹಂದಿ ಸಾಕಣೆಗೆ ಸಹಾಯವಾಗುವಂತೆ ಕೃಷಿ ಕೂಲಿಕಾರರಿಗೆ ಆಧಾರ ರಹಿತ ಸಾಲ ನೀಡಬೇಕು. ಕೂಲಿ ಹಣವನ್ನು ಸಾಲಕ್ಕೆ ವಜಾ ಮಾಡಬಾರದು ಎಂದು ಒತ್ತಾಯಿಸಿದರು.
ತಾಲ್ಲೂಕು ಘಟಕ ಅಧ್ಯಕ್ಷ ಶಿವಮಲ್ಲು, ಹುಸ್ಕೂರು ವಲಯ ಸಮಿತಿ ಅಧ್ಯಕ್ಷ ಹೊಟ್ಟೆಮಾರಯ್ಯ, ತಾಲ್ಲೂಕು ಕಾರ್ಯದರ್ಶಿ ಸರೋಜಮ್ಮ, ಶಿವಕುಮಾರ್, ನಿಂಗರಾಜು, ಶಿವಯ್ಯ ಇದ್ದರು.