ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಸ್ತಿ ತೆರಿಗೆ ಸಂಗ್ರಹಕ್ಕೆ ಅಧಿಕಾರಿಗಳ ಅಸಹಕಾರ’

Last Updated 20 ಜುಲೈ 2017, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ಆಸ್ತಿ ತೆರಿಗೆ ಸಂಗ್ರಹಕ್ಕೆ ಅಧಿಕಾರಿಗಳು ಸಹಕರಿಸುತ್ತಿಲ್ಲ. ಆಸ್ತಿ ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳುವಂತೆ 15 ಪತ್ರ ಬರೆದರೂ ಅಧಿಕಾರಿಗಳು ಸ್ಪಂದಿಸಿಲ್ಲ’ ಎಂದು ಬಿಬಿಎಂಪಿಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ಗುಣಶೇಖರ ಅಸಮಾಧಾನ ವ್ಯಕ್ತಪಡಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2014ರಿಂದ 2017ರ ಅವಧಿಯಲ್ಲಿ 343 ಬೃಹತ್‌ ಕಟ್ಟಡಗಳಿಗೆ ವಾಸಯೋಗ್ಯ (ಒ.ಸಿ) ಪ್ರಮಾಣಪತ್ರ  ನೀಡಲಾಗಿದೆ. ಈ ಕಟ್ಟಡಗಳಲ್ಲಿ  25 ಸಾವಿರ ಘಟಕಗಳು (ಮನೆಗಳು) ಇವೆ. ಕೆಲವು ಕಟ್ಟಡಗಳಿಂದ ಒಂದು ವರ್ಷದ ಆಸ್ತಿ ತೆರಿಗೆಯನ್ನು ಮಾತ್ರ ಸಂಗ್ರಹ ಮಾಡಲಾಗಿದೆ. ಕೆಲವು ಕಟ್ಟಡಗಳ ತೆರಿಗೆ ಸಂಗ್ರಹಿಸಿಲ್ಲ. ಇದರಿಂದ ಪಾಲಿಕೆಯ ಖಜಾನೆಗೆ ₹200 ಕೋಟಿ ನಷ್ಟ ಉಂಟಾಗಿದೆ’ ಎಂದರು.

‘ತೆರಿಗೆ ಸಂಗ್ರಹಕ್ಕೆ ಅಧಿಕಾರಿಗಳು ಉದಾಸೀನ ತೋರುತ್ತಿದ್ದಾರೆ. ಆಯುಕ್ತರ ಆದೇಶವನ್ನೂ ಪಾಲಿಸುತ್ತಿಲ್ಲ. ಕೆಲವು ಭ್ರಷ್ಟ ಅಧಿಕಾರಿಗಳು ಆಸ್ತಿ ಮಾಲೀಕರ ಜತೆಗೆ ಶಾಮೀಲಾಗಿದ್ದಾರೆ’ ಎಂದು ಅವರು ಆರೋಪಿಸಿದರು.

‘ಅಧಿಕಾರಿಗಳು ಒಂದು ವಾರದೊಳಗೆ ಬೃಹತ್‌ ಕಟ್ಟಡಗಳಿಂದ ಆಸ್ತಿ ತೆರಿಗೆ ವಸೂಲಿ ಮಾಡಬೇಕು. ಇಲ್ಲದಿದ್ದರೆ ಬಿಬಿಎಂಪಿ ಪುನರ್‌ರಚನಾ ಸಮಿತಿಯಿಂದ ಈ ಪ್ರಕರಣದ ಬಗ್ಗೆ ತನಿಖೆ  ಮಾಡಿಸುತ್ತೇನೆ. ಬಳಿಕ ಅದನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT