ದೇವನಹಳ್ಳಿ: ಬಯಲು ಸೀಮೆ ಪ್ರದೇಶ ಜನರ ಬೇಡಿಕೆಯಂತೆ ಎತ್ತಿನ ಹೊಳೆ ಯೋಜನೆಗೆ ಸರ್ಕಾರ ಮುಂದಾಗಿದೆ, ಇದು ವಿಳಂಬವಾಗುತ್ತಿಲ್ಲ ಚೆಕ್ಕ್ ಡ್ಯಾಂಗಾಗಿ ನೀಡುತ್ತಿರುವ ಪರಿಹಾರದಿಂದ ಸ್ವಲ್ಪ ತೊಡಕಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಆರದೇಶನಹಳ್ಳಿ ಮತ್ತು ಬನ್ನಿಮಂಗಲ ಗ್ರಾಮದಲ್ಲಿ ಗುರುವಾರ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ನಡೆದ ಭೂಮಿ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು.
‘13 ಸಾವಿರ ಕೋಟಿ ಬೃಹತ್ ಯೋಜನೆಯನ್ನು ಎರಡೆ ದಿನದಲ್ಲಿ ಜಾದು ಮಾಡಲು ಸಾಧ್ಯವಿಲ್ಲ. ಯೋಜನೆಗೆ ಹಣದ ಕೊರತೆ ಇಲ್ಲ. ನಾಲ್ಕಾರು ಕಡೆ ನೀರು ಶೇಖರಣೆ ಮಾಡಿಕೊಳ್ಳುವ ಚೆಕ್ ಡ್ಯಾಂಗಾಗಿ ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ’ ಎಂದರು.
‘ಚೆಕ್ ಡ್ಯಾಂ ವ್ಯಾಪ್ತಿಯಲ್ಲಿ ಕೆಲವು ಗ್ರಾಮಗಳನ್ನು ಸ್ಥಳಾಂತರ ಮಾಡಲಾಗುತ್ತದೆ. ಯೋಜನೆ ಬಗ್ಗೆ ಅನುಮಾನವೇ ಬೇಡ’ ಎಂದರು. ಬೆಂಗಳೂರಿನಿಂದ ತ್ಯಾಜ್ಯ ನೀರು ಸಂಸ್ಕರಿಸಿ ದೇವನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರು ಹರಿಸುವುದರಿಂದ ಯಾವುದೇ ರೀತಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ. ಕೆರೆಗಳಿಗೆ ಮಾತ್ರ ಸಿಮೀತವಾಗಿರುತ್ತದೆ’ ಎಂದರು.
ತ್ಯಾಜ್ಯನೀರು ಪೂರೈಕೆ ಎಂದಾಕ್ಷಣ ಭಯ ಪಡುವ ಅಗತ್ಯವಿಲ್ಲ. ಎತ್ತಿನ ಹೊಳೆ ಯೋಜನೆ ಕಾಮಗಾರಿಗೆ ಟೆಂಡರ್ ನಿಯಮದಂತೆ ಪೈಪ್ ಖರೀದಿಸಲಾಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಮುಖಂಡ ಆರ್.ಆಶೋಕ್ ಹೇಳಿಕೆಯಲ್ಲಿ ಹುರುಳಿಲ್ಲ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಮಾತನಾಡಿ, ‘ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಕುಡಿಯುವ ನೀರಿನ ಯೋಜನೆಯಡಿ ಅರದೇಶನಹಳ್ಳಿ ಗ್ರಾಮದಲ್ಲಿ ₹ 20 ಲಕ್ಷ ವೆಚ್ಚದ ಓವರ್ ಹೆಡ್ ಟ್ಯಾಂಕ್ ಮತ್ತು ಬನ್ನಿಮಂಗಲ ಗ್ರಾಮದಲ್ಲಿ ಕೊಳವೆ ಬಾವಿ ಪೈಪ್ ಲೈನ್ ಸೇರಿ ₹ 22 ಲಕ್ಷ ವೆಚ್ಚದಲ್ಲಿ ನೀರಿನ ಟ್ಯಾಂಕ್ ಗೆ ಭೂಮಿ ಪೂಜೆ ನಡೆಸಲಾಗುತ್ತಿದೆ’ ಎಂದರು.
ವೆಂಕಟಸ್ವಾಮಿ, ಮುನಿ ನರಸಿಂಹಯ್ಯ, ಜಿ.ಪಂ ಸದಸ್ಯೆ ರಾಧಮ್ಮ ಮುನಿರಾಜು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರತ್ನಮ್ಮ, ಬಯಾಪ ಸದಸ್ಯ ಶ್ರೀರಾಮಯ್ಯ, ಮುಖಂಡ ಎಸ್.ಜಿ. ಮಂಜುನಾಥ್ ,ಶಾಂತಕುಮಾರ್, ನಾಗೇಶ್, ಕೆ. ಪಟಾಲಪ್ಪ, ದೇವಗಾನಹಳ್ಳಿ ಮಾರುತಿ, ಲಿಂಗದೀರಗೊಲ್ಲಹಳ್ಳಿ ಮಾರುತಿ ಇದ್ದರು.