ಮೈಸೂರು: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಳಿಸಲಾಗದ ಶಾಯಿ ಬದಲಿಗೆ ಮಾರ್ಕರ್ ಪೆನ್ ಬಳಸುವ ಸಂಬಂಧ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಾಚಾರಿ ಅವರು ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ಗೆ ಶುಕ್ರವಾರ ಭೇಟಿ ನೀಡಿ ಅದರ ಸಾಧಕ–ಬಾಧಕಗಳನ್ನು ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಪಾಲಿಕೆಗಳಿಗೆ 2018ರಲ್ಲಿ ಚುನಾವಣೆ ನಡೆಯಲಿದೆ. ಮತದಾರರ ಬೆರಳಿಗೆ ಶಾಯಿ ಬದಲಿಗೆ ಪೆನ್ ಬಳಕೆ ಮಾಡುವ ಚಿಂತನೆ ಇದೆ. ಇದರ ತಯಾರಿಕೆ, ಗುಣಮಟ್ಟ ಹಾಗೂ ದರ ವ್ಯತ್ಯಾಸದ ಕುರಿತು ಚರ್ಚಿಸಲು ಬಂದಿದ್ದೇನೆ’ ಎಂದು ಹೇಳಿದರು.
‘ಅಳಿಸಲಾಗದ ಮಾರ್ಕರ್ ಪೆನ್ನೊಂದನ್ನು ಸಾವಿರ ಮತದಾರರಿಗೆ ಬಳಕೆ ಮಾಡಲು ಸಾಧ್ಯವಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಮತದಾನ ಪ್ರಮಾಣ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಇದಕ್ಕೆ ಅನುಗುಣವಾಗಿ ಪೆನ್ಗಳ ಅಗತ್ಯವಿದೆ. ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈಗಾಗಲೇ ಇದು ಬಳಕೆಯಾಗಿದೆ’ ಎಂದರು.
ಕ್ಷೇತ್ರ ಪುನರ್ ವಿಂಗಡಣೆ
ರಾಜ್ಯದ 100 ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಾಚಾರಿ ತಿಳಿಸಿದರು.
‘ಪುರಸಭೆ, ನಗರಸಭೆ ಹಾಗೂ ಪಾಲಿಕೆಯ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಆಯೋಗಕ್ಕೆ ಕಳುಹಿಸುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಸಲಾಗಿತ್ತು. ಇನ್ನುಳಿದ ಸಂಸ್ಥೆಗಳ ಕ್ಷೇತ್ರ ಪುನರ್ ವಿಂಗಡಣೆ ಕೂಡ ಪ್ರಗತಿಯಲ್ಲಿದೆ’ ಎಂದು ಹೇಳಿದರು.