ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪ್ರಗತಿದಾಯಕ ಆರ್ಥಿಕ ಸುಧಾರಣಾ ಕ್ರಮವಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ ಜಿಎಸ್ಟಿ ಸಲಹಾ ಸಮಿತಿ ಅಧ್ಯಕ್ಷ ಜಿ.ಟಿ ಮನೋಹರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಎಸ್ಟಿ ಮತ್ತು ಅದರ ಸವಾಲುಗಳ ಕುರಿತು ಅಮೃತ ವಿಶ್ವವಿದ್ಯಾಲಯ ಇಲ್ಲಿ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.
‘ಯಾವುದೇ ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಿದರೂ ಸಮಸ್ಯೆಗಳು ಎದುರಾಗುತ್ತವೆ. ಜಿಎಸ್ಟಿ ವಿಷಯದಲ್ಲೂ ಅದೇ ಆಗಿದೆ. ಸರ್ಕಾರ ಇದನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತಿದೆ’ ಎಂದು ಅವರು ಹೇಳಿದರು.
‘ಜಿಎಸ್ಟಿಯಿಂದ ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ ಎಂಬುದು ತಪ್ಪು ಕಲ್ಪನೆ. ಜಿಎಸ್ಟಿ ಅಂಕಿಅಂಶಗಳನ್ನು ಗಮನಿಸಿದರೆ ಶೇ 80ರಷ್ಟು ಉತ್ಪನ್ನಗಳ ತೆರಿಗೆ ಕಡಿಮೆಯಾಗಲಿದೆ’ ಎಂದರು.
‘ಕರ್ನಾಟಕದಲ್ಲಿ ಜಿಎಸ್ಟಿ ಅತ್ಯಂತ ಸುಲಭ ಮತ್ತು ಸರಳ ರೂಪದಲ್ಲಿ ಜಾರಿಗೊಳ್ಳುತ್ತಿದೆ. ಈ ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಿ ನಮ್ಮ ರಾಜ್ಯ ಇತರೆ ರಾಜ್ಯಗಳಿಗಿಂತ ಮುಂದಿದೆ’ ಎಂದು ಫಿಸ್ಕಲ್ ಪಾಲಿಸಿ ಇನ್ಸ್ಟ್ಯೂಟ್ನ ತರಬೇತುದಾರ ಮತ್ತು ಸಲಹೆಗಾರ ಸುಬ್ರಾಯ ಎಂ.ಹೆಗ್ಡೆ ತಿಳಿಸಿದರು.
ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಕೆ.ಎಸ್.ಬಸವರಾಜು, ಮಾತನಾಡಿ, ‘ಮಾಧ್ಯಮಗಳು ಮತ್ತು ಶಿಕ್ಷಣ ಸಂಸ್ಥೆಗಳು ಜಿಎಸ್ಟಿ ಬಗ್ಗೆ ಗ್ರಾಹಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಜಿಎಸ್ಟಿ ಎಂಬುದು ಮೌಲ್ಯವರ್ಧಿತ ತೆರಿಗೆಯ ಮತ್ತೊಂದು ರೂಪವಷ್ಟೆ’ ಎಂದರು.
‘ಜಿಎಸ್ಟಿ ಹೊಸ ತೆರಿಗೆಯೇನಲ್ಲ. ಇದು ಪರ್ಯಾಯ ತೆರಿಗೆಯಷ್ಟೆ. ಇದೊಂದು ಸಂಕೀರ್ಣ ತೆರಿಗೆ ಪದ್ಧತಿ ಎಂಬುದು ತಪ್ಪು ಕಲ್ಪನೆಯಾಗಿದೆ. ಹೊಸ ತೆರಿಗೆಗೆ ಸಂಬಂಧಿಸಿದ ಮೊದಲ ಆರ್1 ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸೆಪ್ಟಂಬರ್ನಿಂದ ಆರಂಭವಾಗಲಿದೆ’ ಎಂದರು.