ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಸ್ವಾರ್ಥ ಸೇವಾ ಮನೋಭಾವ ಅಗತ್ಯ’

ಭವಿಷ್ಯ ಎಜುಕೇಶನ್ ಚಾರಿಟೆಬಲ್ ಟ್ರಸ್ಟ್‌ನಿಂದ ಪಠ್ಯಪುಸ್ತಕ ವಿತರಣೆ
Last Updated 24 ಜುಲೈ 2017, 9:44 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಆಧುನಿಕತೆಯನ್ನು ಮೈಗೂಡಿಸಿ ಕೊಳ್ಳುತ್ತಿರುವ ಮನುಷ್ಯ ಸ್ವಾರ್ಥ ಹಾಗೂ ಹಣದ ದೃಷ್ಟಿಕೋನದಲ್ಲಿ ಸಹಾಯ ಮಾಡಲು ಮುಂದಾಗುತ್ತಿದ್ದಾನೆ. ಸೇವಾ ಮನೋಭಾವನೆ ಎಂಬುದು ನಿಸ್ವಾರ್ಥವಾಗಿರಬೇಕು’ ಎಂದು ನಿವೃತ್ತ ಶಿಕ್ಷಕ ಬಿ.ಎನ್.ರಾಮಕೃಷ್ಣ ಹೇಳಿದರು.

ರಾಘವೇಂದ್ರಸ್ವಾಮಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಭವಿಷ್ಯ ಎಜುಕೇಶನ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

‘ಯುವಕರು ಸಾಮರ್ಥ್ಯ ಅರಿತು ದುಡಿಯುವಂತಾಗಬೇಕು. ವಿದೇಶಗಳಲ್ಲಿ ಸ್ವಚ್ಛತೆಯೆನ್ನುವುದು ಸಾಮಾನ್ಯವಾಗಿದೆ.  ಸ್ವದೇಶಿಗರು ವಿದೇಶಿ ಸಂಸ್ಕೃತಿಯನ್ನು ಒಪ್ಪಿಕೊಂಡು ಅದರ ಹಿಂದೆ ಓಡುತ್ತಿರುವುದು ವಿಷಾದಕರ’ ಎಂದರು.

‘ಮನುಷ್ಯ ಅತಿಮುಖ್ಯವಾಗಿ ತಮ್ಮ ಪಾಲಿನ ಕೆಲಸವನ್ನು ತಾನು ಮುಗಿಸಬೇಕು. ಕೆಲಸ ಮಾಡುವುದರಲ್ಲಿ ಹಿಂದೆ ಬೀಳಬಾರದು. ಮಾಡುವ ಕೆಲಸದಲ್ಲಿ  ಶ್ರದ್ಧೆಯನ್ನಿಟ್ಟು ಸಂಪೂರ್ಣವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಇದರಿಂದ ಉತ್ತಮ ಸ್ಥಾನ ಲಭಿಸುವುದು ಖಂಡಿತ’ ಎಂದರು.

ಕೊಂಗಾಡಿಯಪ್ಪ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎನ್‌.ಶಶಿಧರ್ ಮಾತನಾಡಿ, ‘ವಿದ್ಯಾರ್ಥಿಗಳು ಹಾಳಾಗಲು ಪೋಷಕರು ಹಾಗೂ ಶಿಕ್ಷಕರು ಮುಖ್ಯ ಕಾರಣ. ಕೆಟ್ಟ ಪೋಷಕರಿರಬಹುದು, ಕೆಟ್ಟ ಶಿಕ್ಷಕರಿರಬಹುದು. ಆದರೆ ಕೆಟ್ಟ ವಿದ್ಯಾರ್ಥಿ ಇರುವುದಿಲ್ಲ’ ಎಂದರು.

‘ಒಬ್ಬ ವಿದ್ಯಾರ್ಥಿ ಸಮಾಜದಲ್ಲಿ ಕೆಟ್ಟ ಹೆಸರು ಪಡೆಯಲು ಶಿಕ್ಷಕ ಅಥವಾ ಪೋಷಕರು ಪ್ರಮುಖ ಪಾತ್ರ ವಹಿಸುತ್ತಾರೆ’ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್‌.ಪಿ. ರಾಜಣ್ಣ ಮಾತನಾಡಿ, ಸಹಾಯ ಮಾಡುತ್ತೇವೆ ಎಂದು ಸಾಕಷ್ಟು ಮಂದಿ ಮುಂದಾಗುತ್ತಾರೆ. ಆದರೆ ರೂಪಿಸಿದ ಯೋಜನೆಯನ್ನು ಪರಿಪೂರ್ಣವಾಗಿ ಮುಗಿಸುವ ನಿಟ್ಟಿನಲ್ಲಿ ಸಫಲತೆ ಕಾಣುವವರು ಮಾತ್ರ ಕೆಲವರಷ್ಟೆ  ಎಂದು ಹೇಳಿದರು.

ನಗರದ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು. ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುರೇಶ್, ಭವಿಷ್ಯ ಚಾರಿಟೆಬಲ್ ಟ್ರಸ್ಟ್‌ ಅಧ್ಯಕ್ಷ ನಾಗರಾಜು, ಶ್ರೀಪಾಲ್, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT