ರಾಮನಗರ: ‘ಹೈನುಗಾರಿಕೆ ಮತ್ತಷ್ಟು ಅಭಿವೃದ್ಧಿಗೊಳಿಸಿ ರೈತರನ್ನು ಉತ್ತೇಜಿಸಲು ದೇಶದಲ್ಲಿಯೇ ಹೈನುಗಾರಿಕೆಗೆ ಹೆಸರಾದ ಗುಜರಾತ್ ರಾಜ್ಯಕ್ಕೆ ಅಧ್ಯಯನ ಪ್ರವಾಸ ಆಯೋಜಿಸಲಾಗಿದೆ’ ಎಂದು ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜ್ ಹೇಳಿದರು.
ಒಂದು ವಾರ ಕಾಲ ಗುಜರಾತ್ ರಾಜ್ಯಕ್ಕೆ ಹೈನುಗಾರಿಕೆ ಪ್ರವಾಸ ಕೈಗೊಂಡಿರುವ ಹಾಲು ಉತ್ಪಾದಕರ ಪ್ರವಾಸಕ್ಕೆ ಸೋಮವಾರ ಬೆಂಗಳೂರು ಹಾಲು ಒಕ್ಕೂಟದ ರಾಮನಗರ ಶಿಬಿರ ಕಚೇರಿ ಮುಂದೆ ಚಾಲನೆ ನೀಡಿ ಅವರು ಮಾತನಾಡಿದರು. ‘ಯಶಸ್ವಿ ಹೈನುಗಾರರನ್ನು ಗುರುತಿಸಿ ಪ್ರವಾಸ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.
‘ಹಾಲು ಉತ್ಪಾದಕ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ವಹಣೆ, ಶುದ್ಧ ಹಾಲು ಪೂರೈಕೆ, ಹಾಲಿನ ಗುಣಮಟ್ಟ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳು, ಪಶು ಸಾಕಾಣಿಕೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅಧ್ಯಯನ ಪ್ರವಾಸದಲ್ಲಿ ಪ್ರಾಯೋಗಿಕ ವಾಗಿ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು.
‘ಗುಜರಾತ್ನಲ್ಲಿ ಹಾಲಿನಿಂದ ನೂರಾರು ಉಪ ಉತ್ಪನ್ನಗಳನ್ನು ತಯಾ ರಿಸಿ ದೇಶದ ವಿವಿಧ ಕಡೆ ಮಾರಾಟ ಮಾಡಲಾಗುತ್ತಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ನಂದಿನಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ’ ಅವರು ಎಂದು ತಿಳಿಸಿದರು.
ಬೆಂಗಳೂರು ಹಾಲು ಒಕ್ಕೂಟದ ರಾಮನಗರ ಶಿಬಿರ ಉಪವ್ಯವಸ್ಥಾಪಕ ಡಾ.ಶಿವಶಂಕರ್, ವಿಸ್ತರಣಾಧಿ ಕಾರಿಗಳಾದ ವಿನಯ್ ಕುಮಾರ್, ಕವಿತಾ, ಜಯರಾಮಯ್ಯ, ನಂಜಯ್ಯ, ಸಮಾಜ ಸೇವಕ ಮಾಯಗಾನಹಳ್ಳಿ ರಂಗಸ್ವಾಮಿ, ನಾಗರಕಲ್ಲುದೊಡ್ಡಿ ಪುಟ್ಟಲಿಂಗಯ್ಯ, ಉಮೇಶ್, ಮೆಳೆಹಳ್ಳಿ ಶಿವರಾಜು ಇದ್ದರು.