‘ದೇಶದ ಹಿತಾಸಕ್ತಿ ಮತ್ತು ಜನರ ಹಿತಕ್ಕಾಗಿ ಕೇಳುವ ಮಾಹಿತಿಗಳಿಗೆ ಖಾಸಗಿತನ ಇಲ್ಲ. ದೇಶದ ಹಿತ, ಜನರ ಅನುಕೂಲಕ್ಕಾಗಿ ಸರ್ಕಾರವು ಜನರ ಬೆರಳಚ್ಚು, ಪಾಪೆ ಪೊರೆಯ ಸ್ಕ್ಯಾನ್ ಮಾಡಲು ಸೂಚಿಸಬಹುದು’ ಎಂದು ಅಟಾರ್ನಿ ಜನರಲ್ ಹೇಳಿದರು.
‘ಹಾಗಿದ್ದರೂ, ಕೇಳಿದ ಮಾಹಿತಿಯು ಅಪ್ರಸ್ತುತವಾಗಿದ್ದರೆ ಜನರು ಮಾಹಿತಿ ನೀಡಲು ನಿರಾಕರಿಸಬಹುದು. ಉದಾಹರಣೆಗೆ, ಆಧಾರ್ ನೋಂದಣಿ ಸಂದರ್ಭದಲ್ಲಿ ವ್ಯಕ್ತಿಗೆ ವಿವಾಹೇತರ ಸಂಬಂಧ ಇದೆಯೇ ಎಂಬಂತಹ ಪ್ರಶ್ನೆ ಕೇಳಿದರೆ, ಆತ ಅದಕ್ಕೆ ಉತ್ತರಿಸಬೇಕೆಂದಿಲ್ಲ. ಹಾಗಾಗಿ, ಮಾಹಿತಿಯ ಖಾಸಗಿತನ ವಿಚಾರವನ್ನು ಪ್ರಕರಣ ಆಧರಿತವಾಗಿ ನಿರ್ಧರಿಸಬೇಕು’ ಎಂದು ಹೇಳಿದರು.
ಜನರ ವೈಯಕ್ತಿಕ ಮಾಹಿತಿಗಳನ್ನು ಸುರಕ್ಷಿತವಾಗಿಡಲು ಸರ್ಕಾರ ಶಾಸನಬದ್ಧ ಆಸಕ್ತಿ ಹೊಂದಿದೆ ಎಂದು ವೇಣುಗೋಪಾಲ್ ನ್ಯಾಯಪೀಠಕ್ಕೆ ತಿಳಿಸಿದರು.