ರಾಮನಗರ: ಜಿಲ್ಲೆಯಲ್ಲಿ ಮಳೆಯ ಕೊರತೆಯು ತೀವ್ರವಾಗಿದ್ದು, ಈ ಬಾರಿಯೂ ಬರ ಆವರಿಸಿಕೊಳ್ಳುವುದು ನಿಶ್ಚಿತವಾದಂತೆ ಕಾಣುತ್ತಿದೆ. ಇನ್ನೊಂದೆಡೆ, ಈಗಾಗಲೇ ಬಿತ್ತನೆ ಯಾಗಿರುವ ಜಮೀನುಗಳಲ್ಲಿ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.
ಮೇ ಅಂತ್ಯದಲ್ಲಿ ಉತ್ತಮ ಮಳೆ ಸುರಿದ ಕಾರಣ ರಾಮನಗರ ಹಾಗೂ ಮಾಗಡಿ ಭಾಗದಲ್ಲಿ ಹೆಚ್ಚು ರೈತರು ಬಿತ್ತನೆ ಕಾರ್ಯ ಕೈಗೊಂಡಿದ್ದರು. ಇದೀಗ ಆ ಬೆಳೆಗಳು ಒಣಗತೊಡಗಿವೆ. ಕೆಲವರು ಟ್ಯಾಂಕರ್ಗಳಲ್ಲಿ, ಪಕ್ಕದ ಕೊಳವೆ ಬಾವಿಗಳಿಂದ ನೀರನ್ನು ಪಡೆದು ಬೆಳೆಗೆ ಹಾಯಿಸುವ ಸಾಹಸ ಮಾಡತೊಡಗಿದ್ದಾರೆ.
ಬಿತ್ತನೆ ಕುಂಠಿತ: ಮಳೆಯೇ ಇಲ್ಲದ ಕಾರಣ ಇಂದಿಗೂ ಹೆಚ್ಚಿನ ಪ್ರಮಾಣದಲ್ಲಿ ರೈತರು ಜಮೀನುಗಳನ್ನು ಹಾಗೆಯೇ ಬಿಟ್ಟಿದ್ದಾರೆ, ರಾಮನಗರ ಹಾಗೂ ಮಾಗಡಿ ತಾಲ್ಲೂಕುಗಳಲ್ಲಿ ಕೊಂಚ ಹೆಚ್ಚು ಕೃಷಿ ಕಾರ್ಯ ನಡೆದಿದ್ದರೆ, ಕನಕಪುರ ತಾಲ್ಲೂಕಿನಲ್ಲಿ ಬರದಿಂದ ರೈತರು ಹೊಲಗಳತ್ತ ಮುಖ ಮಾಡುವುದನ್ನೇ ನಿಲ್ಲಿಸಿದ್ದಾರೆ. ಚನ್ನಪಟ್ಟಣದಲ್ಲಿ ಕೆರೆಗಳು ಒಣಗಿರುವ ಕಾರಣ ಅಲ್ಲಿಯೂ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆ ಉಂಟಾಗಿದೆ.
ವಾಡಿಕೆಯಂತೆ ಜುಲೈ ಅಂತ್ಯದವರೆಗೆ ಕನಿಷ್ಠ 59,000 ಹೆಕ್ಟೇರ್ನಷ್ಟು ಕೃಷಿ ಭೂಮಿಯಲ್ಲಿ ಬಿತ್ತನೆ ಕಾರ್ಯ ಆಗಬೇಕಿತ್ತು. ಆದರೆ ಈವರೆಗೆ ಕೇವಲ 19,825 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ರೈತರು ಹೊಲಕ್ಕೆ ಬೀಜ ಚೆಲ್ಲಿದ್ದಾರೆ. ಕಳೆದ ವರ್ಷ ಮಳೆ ಕೊರತೆಯ ನಡುವೆ ಯೂ ಜುಲೈ ಅಂತ್ಯದವರೆಗೆ 29,308 ಹೆಕ್ಟೇರ್ನಷ್ಟು ಪ್ರದೇಶವು ಕೃಷಿ ಚಟುವಟಿಕೆಗೆ ಒಳಪಟ್ಟಿತ್ತು.
ಮಳೆ ಕೊರತೆ ತೀವ್ರ: ಜಿಲ್ಲೆಯಲ್ಲಿ ಈ ಮುಂಗಾರು ಬಹುತೇಕ ವಿಫಲಗೊಂ ಡಿದೆ. ಎಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಿದ್ದಿಲ್ಲ. ಒಟ್ಟಾರೆ ಶೇ 50ರಷ್ಟು ಕಡಿಮೆ ಮಳೆ ಆಗಿದೆ. ಕೃಷಿಗೆ ಅನುಕೂಲಕರವಾದ ವಾತಾ ವರಣ, ತೇವಾಂಶ ಇಲ್ಲದ ಕಾರಣ ಸಹಜ ವಾಗಿಯೇ ಬಿತ್ತನೆ ಕಾರ್ಯ ಕುಂಠಿತ ಗೊಂಡಿದೆ. ಕಳೆದ ವರ್ಷ ಇದೇ ಜುಲೈ 26ರಿಂದ 28ರ ವರೆಗೆ ಜಿಲ್ಲೆಯಲ್ಲಿ ದಾಖಲೆ ಮಳೆ ಸುರಿದಿತ್ತು. ಈ ಮೂರು ದಿನದ ಅವಧಿ ಯಲ್ಲಿಯೇ ಸುಮಾರು 120 ಮಿ.ಮೀ
ನಷ್ಟು ಮಳೆಯಾಗಿದ್ದು, ಬಿತ್ತನೆ ಕಾರ್ಯಕ್ಕೆ ಅನುಕೂಲವಾಗಿತ್ತು. ಆದರೆ ಈ ವರ್ಷ ಅದೂ ಇಲ್ಲದಾಗಿದೆ. ‘ಮಳೆಯ ಕೊರತೆಯಿಂದಾಗಿ ನೆಲ ಗಡಲೆ, ಅವರೆ, ತೊಗರಿ ಸೇರಿದಂತೆ ಪ್ರಮುಖ ಬೆಳೆಗಳನ್ನು ರೈತರು ಬಿತ್ತನೆ ಮಾಡಿಲ್ಲ. ಇದೀಗ ರಾಗಿ ಬಿತ್ತನೆಯ ಕಾಲವಾಗಿದ್ದು, ಅದಕ್ಕೂ ತೇವಾಂಶದ ಕೊರತೆ ಇದೆ. ಜಿಲ್ಲೆಯಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದು, 70,000 ಹೆಕ್ಟೇರ್ನಷ್ಟು ಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತಿದೆ. ಮುಂದೆ ಮಳೆಯಾದಲ್ಲಿ ರೈತರು ಅಲ್ಪ ಹಾಗೂ ಮಧ್ಯಮ ಅವಧಿಯ ರಾಗಿ ತಳಿ ಬಿತ್ತನೆ ಮಾಡಬಹುದಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ದೀಪಜಾ ‘ಪ್ರಜಾವಾಣಿ’ಗೆ ತಿಳಿಸಿದರು.
ಇಳುವರಿ ಕುಂಠಿತ: ತೇವಾಂಶದ ಕೊರತೆಯಿಂದಾಗಿ ಈ ಬಾರಿಯ ಕೃಷಿ ಉತ್ಪನ್ನವೂ ಕಡಿಮೆ ಇರಲಿದೆ. ಬೇಸಿಗೆಯ ಅವಧಿಯಲ್ಲಿ ಬಿತ್ತನೆಯಾಗಿ ಕೊಂಚ ಹಸಿರಾಗಿರುವ ಗಿಡಗಳಲ್ಲೂ ಇಳುವರಿ ಕುಸಿಯಲಿದೆ. ಮಳೆ ಬಂದರೂ ಇಲ್ಲ ಇನ್ನಷ್ಟು ಕಡಿಮೆ ಆದರೂ ಇಳುವರಿ ನಿರೀಕ್ಷಿತ ಪ್ರಮಾಣದಲ್ಲಿ ಸಿಗುವುದಿಲ್ಲ. ಇದರಿಂದಾಗಿ ಈ ಬಾರಿಯೂ ರೈತರು ನಷ್ಟ ಅನುಭವಿಸಬಹುದು ಎನ್ನುತ್ತಾರೆ ಕೃಷಿ ಅಧಿಕಾರಿಗಳು.
*
ಮಳೆ ಇಲ್ಲದೆ ಬಹುತೇಕ ರೈತರು ರಾಗಿ ಬಿತ್ತನೆಗೆ ಮಾಡದೇ ಕೈಚೆಲ್ಲಿದ್ದಾರೆ. ಮುಂದೆ ಮಳೆಯಾದಲ್ಲಿ ಮಧ್ಯಮ ಅವಧಿ ತಳಿ ಬಿತ್ತನೆಗೆ ಅವಕಾಶ ಇದೆ.
–ದೀಪಜಾ
ಜಂಟಿ ನಿರ್ದೇಶಕಿ, ಕೃಷಿ ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.