ಇಲ್ಲಿ ನನಗೊಂದು ಘಟನೆ ನೆನಪಾಗುತ್ತದೆ. 1970ರ ದಶಕ. ನಾನಾಗ ಕೊಳ್ಳೇಗಾಲದ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದೆ. ಆ ಊರಿನ ಸಂಪ್ರದಾಯದಂತೆ, ದೇವರ ಪಲ್ಲಕ್ಕಿಯನ್ನು ದಲಿತರು ಹೊರುತ್ತಿದ್ದರು, ಪೂಜಾರಿಗಳು ಹಿಂದೆ ಘಂಟೆ ಬಾರಿಸುತ್ತ ಮಂಗಳಾರತಿ ನೀಡುತ್ತಿದ್ದರು. ಒಮ್ಮೆ ಹೀಗಾಯಿತು: ದಲಿತರು, ‘ನಾವು ಪಲ್ಲಕ್ಕಿ ಹೊರುವುದಿಲ್ಲ; ನೀವೇ ಬೇಕಾದರೆ ಪಲ್ಲಕ್ಕಿ ಹೊರಿ; ನಾವು ಮಂಗಳಾರತಿ ಮಾಡುತ್ತೇವೆ’ ಎಂದರು. ದೊಡ್ಡ ಗಲಾಟೆಯಾಯಿತು. ಪೊಲೀಸರು ಬಂದರು. ಕಡೆಗೆ ದೇವರು ತೆರೆದ ಜೀಪಿನಲ್ಲಿ ಮೆರವಣಿಗೆ ಹೊರಟಿತು. ಪೂಜಾರಿಗಳು ಸೀಟಿನಲ್ಲಿ ಕುಳಿತು ಮಂಗಳಾರತಿ ನೀಡುತ್ತಿದ್ದರು. ಪ್ರಳಯವೇನೂ ಸಂಭವಿಸಲಿಲ್ಲ. ಕಾಲಾಯ ತಸ್ಮೈ ನಮಃ!