ನವದೆಹಲಿ: ಸಿಇಒ ವಿಶಾಲ್ ಸಿಕ್ಕಾ ಅವರ ಹಠಾತ್ ರಾಜೀನಾಮೆಯಿಂದ ಉಂಟಾಗಿರುವ ಅನಿಶ್ಚಿತತೆ ಮಧ್ಯೆಯೇ, ಇನ್ಫೊಸಿಸ್ನ ಸಹ ಅಧ್ಯಕ್ಷ ರವಿ ವೆಂಕಟೇಶನ್ ಅವರು ಮಂಗಳವಾರ ಇಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದರು.
ಸಂಸ್ಥೆಯಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವೆಂಕಟೇಶನ್ ಅವರು ವಿವರಿಸಿದ್ದಾರೆ ಎಂದು ಭಾವಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಂಸ್ಥೆ ನಿರಾಕರಿಸಿದೆ.
ನಿರ್ದೇಶಕ ಮಂಡಳಿ ವೈಫಲ್ಯ: ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ನಿರ್ದೇಶಕ ಮಂಡಳಿಯು ನಾರಾಯಣ ಮೂರ್ತಿ ಅವರ ಮೇಲೆ ಆರೋಪ ಹೊರಿಸಲು ಮುಂದಾಗಿರುವುದು ಸ್ಪಷ್ಟಗೊಳ್ಳುತ್ತದೆ ಎಂದು ಸಂಸ್ಥೆಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ವಿ. ಬಾಲಕೃಷ್ಣನ್ ಅವರು ಹೇಳಿದ್ದಾರೆ.
‘ಮೂರ್ತಿ ಅವರಿಗೆ ಇದ್ದ ಪ್ರಭಾವಳಿ ಈಗ ಕಾಣೆಯಾಗಿದೆ ಎನ್ನುವ ಕೆಲವರ ವಾದವನ್ನೂ ಅವರು ಪ್ರಶ್ನಿಸಿದ್ದಾರೆ.
ಕಾರ್ಪೊರೇಟ್ ಆಡಳಿತ ಮತ್ತು ಮಂಡಳಿಯ ಉತ್ತರದಾಯಿತ್ವ ವಿಷಯ ಪ್ರಸ್ತಾಪಿಸುವ ಮೂಲಕ ಷೇರುದಾರರ ಹಿತಾಸಕ್ತಿ ರಕ್ಷಿಸಲು ನಾರಾಯಣ ಮೂರ್ತಿ ಅವರು ಮುಂದಾಗಿದ್ದಾರೆ.
ಮಂಡಳಿಯ ಕೆಲ ಮಾಜಿ ನಿರ್ದೇಶಕರು ಮೂರ್ತಿ ಅವರನ್ನು ಸಾರ್ವಜನಿಕವಾಗಿ ಟೀಕಿಸುತ್ತಿರುವುದು ಅಸಹಜ ಮತ್ತು ವಿಲಕ್ಷಣ ವಿದ್ಯಮಾನವಾಗಿದೆ’ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.