ಡಂಬಳ: ಇಲ್ಲಿನ ಗ್ರಾಮ ಪಂಚಾಯಿತಿ ಗುತ್ತಿಗೆ ಆಧರಿತ ಸ್ವಚ್ಛತಾ ಸಿಬ್ಬಂದಿ 10 ತಿಂಗಳು ಕಳೆದರೂ ಸಿಗದ ಸಂಬಳ ಸಿಗದೇ ಪರದಾಡುತ್ತಿದ್ದಾರೆ. ಪಂಚಾ ಯಿತಿಯಲ್ಲಿ ಒಟ್ಟು 17 ಸ್ವಚ್ಛತಾ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದು, ಅವರ ಪೈಕಿ 9 ಜನ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ.
ಸಿಬ್ಬಂದಿ ಕಾಯಂಗೊಳಿಸುವಲ್ಲಿಯೂ ತಮಗೆ ಅನ್ಯಾಯ ಆಗಿದ್ದು ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಆಗ್ರಹಿಸಿದ್ದಾರೆ.
‘ಕಳೆದ ವರ್ಷ ನಾವು ಕಸಗುಡಿಸುವ, ಚರಂಡಿ ಸ್ವಚ್ಛಗೊಳಿಸುವ ಸಿಬ್ಬಂದಿ ಸಂಬಳಕ್ಕಾಗಿ ಆಗ್ರಹಿಸಿ ಕುಟುಂಬದ ಇತರ ಸದಸ್ಯರ ಜತೆಗೂಡಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದ್ದರೂ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ’ ಎಂದು ದೇವಪ್ಪ ಮಾದರ, ಸಿದ್ದವ್ವ ಚಲವಾದಿ ನೊಂದುಕೊಳ್ಳುತ್ತಾರೆ.
‘ನಮ್ಮ ದುಡಿಮ ಫಲ ನಮಗೆ ಸಿಗದಂತಾಗಿದೆ. ತುರ್ತು ಪರಿಸ್ಥಿತಿಯಲ್ಲೂ ಹಣವಿಲ್ಲದೇ ಹೆಣಗುವಂತಾಗಿದೆ’ ಎಂದು ಮೈಲೆಪ್ಪ ಮಾದರ ಹಾಗೂ ಬಸವಂತಪ್ಪ ಹರಿಜನ ದೂರಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ತಾಲ್ಲೂಕು ಪಂಚಾಯತಿ ಇಒ ಸಿ.ಆರ್. ಮುಂಡರಗಿ, ‘ಗ್ರಾಮ ಪಂಚಾಯತಿ ಕರ ವಸೂಲಿಯಲ್ಲಿಯೇ ಗುತ್ತಿಗೆ ಸಿಬ್ಬಂದಿಗೆ ಸಂಬಳ ನೀಡಬೇಕು ಪ್ರತಿ ತಿಂಗಳು ಸಂಬಳ ನೀಡಬೇಕಾದರೆ ಸರ್ಕಾರದ ಮಟ್ಟದಲ್ಲಿಯೇ ಚರ್ಚೆಯಾಗಬೇಕು’ ಎಂದು ಸ್ಪಷ್ಟಪಡಿಸಿದರು.