ರಾಮನಾಥಪುರ( ಕೊಣನೂರು): ರಾಮನಾಥಪುರ ಮತ್ತು ಕೊಣನೂರು ಹೋಬಳಿಯ ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು ಕಟ್ಟೇಪುರ ನಾಲೆ ವ್ಯಾಪ್ತಿಯಲ್ಲಿ ನಾಟಿಯಾದ ಭತ್ತದ ಗದ್ದೆಗಳಿಗೆ ಕಂಟಕವಾಗಿ ಪರಿಣಮಿಸಿದೆ.
ಬಿರುಸಿನ ಮಳೆಯಿಂದಾಗಿ ಕಾವೇರಿ ನದಿ ನೀರಿನಮಟ್ಟ ಏರಿಕೆಯಾಗಿದ್ದು, ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ನಾಟಿ ಮಾಡಿದ ಭತ್ತದ ಗದ್ದೆಗಳು ಜಲಾವೃತವಾಗಿ ಪೈರುಗಳು ನೀರಿನಲ್ಲಿ ಕೊಳಯುತ್ತಿವೆ.
ಕಳೆದ ಕೆಲ ತಿಂಗಳಿನಿಂದ ಮಳೆ ಕೊರತೆಯಾಗಿ, ಈಗ ಒಂದೇ ಸಮನೆ ಸುರಿಯುತ್ತಿರುವುದರಿಂದ ನಾಟಿಯಾದ ಗದ್ದೆಗಳು ನೀರಿನಲ್ಲಿ ಮುಳುಗಿವೆ. ನದಿ ನೀರಿನ ಮಟ್ಟ ಏರಿಕೆಯಾದಲ್ಲಿ ಒಂದೆರಡು ದಿನಗಳು ಪೈರುಗಳು ನೀರಿನಲ್ಲಿ ಮುಳುಗಿದ್ದರೆ ಹಾನಿಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಬೆಳಗ್ಗೆ 8.30ರ ವರದಿಯಂತೆ ಕೊಣನೂರಿನಲ್ಲಿ 22.2 ಮಿ.ಮೀ., ರಾಮನಾಥಪುರದಲ್ಲಿ 22.8 ಮಿ.ಮೀ., ಮತ್ತು ಬಸವಾಪಟ್ಟಣದಲ್ಲಿ 19.8 ಮಿ.ಮೀ. ಮಳೆ ಬಿದ್ದಿದೆ.