ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಗ್ರಾಮ ಪಂಚಾಯ್ತಿ ಅಧ್ಯಕ್ಷರ ಮೇಲೆ ಹಲ್ಲೆ: ಮುಸುಕುಧಾರಿಗಳಿಂದ ದುಷ್ಕೃತ್ಯ

ಕೊಲ್ಹಾರದ ಗುರುದೇವ ಲಾಡ್ಜ್‌ಗೆ ನುಗ್ಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಪ.ಪಂ. ಸದಸ್ಯನ ಮೇಲೆ ಹಲ್ಲೆ
Last Updated 7 ಸೆಪ್ಟೆಂಬರ್ 2017, 6:15 IST
ಅಕ್ಷರ ಗಾತ್ರ

ವಿಜಯಪುರ: ಬಸವನಬಾಗೇವಾಡಿ ತಾಲ್ಲೂಕಿನ ಕೊಲ್ಹಾರದ ಗುರುದೇವ ಲಾಡ್ಜ್‌ನ ಕೊಠಡಿಗೆ ಬುಧವಾರ ನಸುಕಿನಲ್ಲಿ ನುಗ್ಗಿದ ಏಳು ಮಂದಿ ಮುಸುಕುಧಾರಿಗಳು, ರೋಣಿಹಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಣಮಂತ ನ್ಯಾಮಗೊಂಡ, ಕೊಲ್ಹಾರ ಪಟ್ಟಣ ಪಂಚಾಯ್ತಿ ಸದಸ್ಯ ಸಿದ್ದು ಗುಣಕಿ ಮೇಲೆ ಹಲ್ಲೆ ನಡೆಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಹಣಮಂತ ನ್ಯಾಮಗೊಂಡ ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲಾಜ್‌ನ ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಮುಸುಕು ಧಾರಿಗಳ ಕೈಯಲ್ಲಿ ಹರಿತವಾದ ಆಯುಧ, ಕಬ್ಬಿಣದ ರಾಡ್‌ ಇದ್ದಿದು ಕಂಡು ಬಂದಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

‘ಲಾಜ್‌ನ ಕೊಠಡಿಯಲ್ಲಿ ನಾವಿಬ್ಬರೂ ಮಲಗಿದ್ದೆವು. ಜೋರಾಗಿ ಬಾಗಿಲು ಬಡಿದರು. ತೆಗೆಯಲಿಲ್ಲ. ಬಾಗಿಲು ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ಕಾರದಪುಡಿ ಎರಚಿ ದರು. ನಾನು ಬೆಡ್‌ಶೀಟ್ ಸಹಾಯದಿಂದ ರಕ್ಷಿಸಿಕೊಂಡೆ. ಹಣಮಂತ ನ್ಯಾಮಗೊಂಡ ಅವರಿಗೆ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದಾರೆ’ ಎಂದು ಹಲ್ಲೆಗೀಡಾದ ಪಟ್ಟಣ ಪಂಚಾಯ್ತಿ ಸದಸ್ಯ ಸಿದ್ದು ಗುಣಕಿ ತಿಳಿಸಿದರು.

ಹಣಮಂತ ನ್ಯಾಮಗೊಂಡ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ರೋಣಿಹಾಳ ಗ್ರಾ.ಪಂ.ಸದಸ್ಯರಾಗಿ ಚುನಾಯಿತರಾಗಿದ್ದರು. ಈಚೆಗಷ್ಟೇ ತನ್ನ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು ಎನ್ನಲಾಗಿದೆ.

ಹಲ್ಲೆಯ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಶಿವಾನಂದ ಪಾಟೀಲ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯ ಕರ್ತರು ಲಾಡ್ಜ್ ಮುಂಭಾಗ ಜಮಾಯಿಸಿ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

‘ಈ ಘಟನೆ ರಾಜಕೀಯ ಪ್ರೇರಿತ ವಾಗಿದೆ. ಹಲ್ಲೆ ನಡೆಸಿದವರು ಯಾರೇ ಆಗಿರಲಿ. ಅವರನ್ನು ಬಂಧಿಸಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡಬೇಕು. ಹಲ್ಲೆ ಎಸಗಿದವರು ಯಾವುದೇ ಪಕ್ಷಕ್ಕೆ ಸೇರಿದವರಾಗಲಿ ಅವರನ್ನು ಆ ಪಕ್ಷದಿಂದ ಹೊರಹಾಕುವ ಕೆಲಸವಾಗಬೇಕು’ ಎಂದು ಶಿವಾನಂದ ಪಾಟೀಲ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT