ಹುಬ್ಬಳ್ಳಿ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ತೆಗೆದುಕೊಂಡ ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶೇ 90ಕ್ಕೂ ಹೆಚ್ಚು ಕಾಮಗಾರಿಗಳನ್ನು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ವಹಿಸಲಾಗಿದೆ. ಅನುದಾನ ಬಳಕೆಯಲ್ಲಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ಇದು ಕೊನೆಯ ಸ್ಥಾನದಲ್ಲಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಯಾವ ವರ್ಷದ ಅನುದಾನವನ್ನೂ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡಿಲ್ಲ. ಬಿಡುಗಡೆಯಾಗಿರುವ ಅನುದಾನದ ಪೈಕಿ ₹2.69 ಕೋಟಿ ಮೊತ್ತಕ್ಕೆ ಶಾಸಕರು ಯಾವ ಕಾಮಗಾರಿ ಕೈಗೊಳ್ಳಬೇಕು ಎಂಬ ಮಂಜೂರಾತಿಯನ್ನೇ ನೀಡಿಲ್ಲ. ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರಿನ ಘಟಕ, ಬಸ್ ಶೆಲ್ಟರ್, ಸಭಾಭವನ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳಿಗೆ ಅನುದಾನ ನೀಡಿದ್ದಾರೆ.
ಶಾಲೆಗಳಿಗೆ ಸ್ಮಾರ್ಟ್ಬೋರ್ಡ್, ಬೆಂಚ್, ಟೇಬಲ್ ಇತ್ಯಾದಿ ಒದಗಿಸಲು ₹ 60 ಲಕ್ಷಕ್ಕೂ ಹೆಚ್ಚು ಅನುದಾನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಬಿಡುಗಡೆ ಮಾಡಿದ್ದಾರೆ. 15–16ನೇ ಸಾಲಿನಲ್ಲಿ ಬಿಡುಗಡೆ ಮಾಡಿರುವ ₹ 30 ಲಕ್ಷದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.
ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ಹಂಚಿಕೆ ಮಾಡಲು ₹ 40 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಫಲಾನುಭವಿಗಳಿಗೆ ಹಂಚಿಕೆಯೂ ಆಗಿದೆ. 2013–14ರಲ್ಲಿ 2 ಕೋಟಿ ಅನುದಾನ ಬಿಡುಗಡೆಯಾಗಿದೆ. ₹1.48 ಕೋಟಿಗೆ ಮಂಜೂರಾತಿ ಪತ್ರ ನೀಡ ಲಾಗಿದ್ದು, ₹ 1.25 ಕೋಟಿ ಖರ್ಚಾಗಿದೆ. ಇನ್ನು ₹ 75 ಲಕ್ಷ ಖರ್ಚಾಗಬೇಕಿದೆ. ಇದೇ ವರ್ಷ 36 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 16 ಪೂರ್ಣಗೊಂಡಿದ್ದು, 20 ಬಾಕಿ ಉಳಿದಿವೆ.
2014–15ರಲ್ಲಿ ₹2 ಕೋಟಿ ಅನು ದಾನ ಮಂಜೂರಾಗಿದೆ. ₹ 1.69 ಕೋಟಿಗೆ ಮಂಜೂರಾತಿ ಪತ್ರ ನೀಡ ಲಾಗಿದ್ದು, ₹ 1.40 ಕೋಟಿ ಖರ್ಚಾಗಿದೆ. ₹ 60 ಲಕ್ಷ ಬಾಕಿ ಉಳಿದಿದೆ. ಒಟ್ಟು 25 ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳಲಾಗಿದ್ದು, ಕೇವಲ 2 ಕಾಮಗಾರಿಗಳನ್ನು ಮಾತ್ರ ಪೂರ್ಣಗೊಳಿಸಲಾಗಿದ್ದು,ಇನ್ನೂ 23 ಕಾಮಗಾರಿಗಳು ಬಾಕಿ ಉಳಿದುಕೊಂಡಿವೆ.
2015–16ರಲ್ಲಿ ₹ 2 ಕೋಟಿ ಮಂಜೂರಾಗಿದ್ದು, ₹ 1.48 ಕೋಟಿಗೆ ಮಂಜೂರಾತ್ರಿ ಪತ್ರ ನೀಡಲಾಗಿದೆ. ₹ 99.75 ಲಕ್ಷ ಖರ್ಚಾಗಿದ್ದು, ₹ 1 ಕೋಟಿ ಬಾಕಿ ಉಳಿದಿದೆ. ಎರಡೂವರೆ ವರ್ಷ ಕಳೆದಿದ್ದರೂ ಅರ್ಧದಷ್ಟು ಹಣ ಖರ್ಚಾಗಿಯೇ ಇಲ್ಲ. 19 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಯಾವುದೇ ಕಾಮಗಾರಿಯೂ ಇನ್ನುವರೆಗೆ ಪೂರ್ಣಗೊಂಡಿಲ್ಲ.
2016–17ರಲ್ಲಿ ₹ 2 ಕೋಟಿ ಮಂಜೂರಾಗಿದ್ದು, ₹ 95 ಲಕ್ಷಕ್ಕೆ ಮಂಜೂರಾತಿ ಪತ್ರ ನೀಡಿದ್ದಾರೆ. ₹ 61.40 ಲಕ್ಷ ಖರ್ಚಾಗಿದ್ದು, ₹ 1.38 ಕೋಟಿ ಬಾಕಿ ಉಳಿದಿದೆ. 11 ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳಲಾಗಿದ್ದು, ಯಾವುದೇ ಕಾಮಗಾರಿಯೂ ಪೂರ್ಣಗೊಂಡಿಲ್ಲ.
‘ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ’
‘ಜಿಲ್ಲಾಡಳಿತ ದಾಖಲೆಗಳನ್ನು ಅಪ್ಡೇಟ್ ಮಾಡುವುದೇ ಇಲ್ಲ‘ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಕ್ಷೇತ್ರದಲ್ಲಿ ಅಂಗವಿಕಲರ ಸಂಖ್ಯೆ ಹೆಚ್ಚಿರುವುದರಿಂದ ಅವರಿಗೆ ತ್ರಿಚಕ್ರ ವಾಹನ ನೀಡಲು ಅನುದಾನ ನೀಡಿದ್ದೇನೆ. ಈಗಾಗಲೇ ನಿರ್ಮಿಸಿರುವ ಬಿಲ್ಡಿಂಗ್ ಮೇಲೆಯೇ ಕಟ್ಟಡ ಮಂಜೂರು ಮಾಡಿದರೂ ಹೊಸದಾಗಿ ಹಲವಾರು ದಾಖಲೆ ಕೇಳುತ್ತಾರೆ.
ಹಾಗಾಗಿ ಕಾಮಗಾರಿ ಜಾರಿಯಲ್ಲಿ ವಿಳಂಬವಾಗುತ್ತಿದೆ. ಕಚೇರಿಯಿಂದ ಕಚೇರಿಗೆ ಫೈಲ್ ಹೋಗಲು ತಿಂಗಳುಗಟ್ಟಲೇ ಹಿಡಿ ಯುತ್ತಿದೆ. ಪಾಲಿಕೆಗೆ ನೀಡಿದ್ದ ಕೆಲವು ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಆದರೂ ಜಿಲ್ಲಾಡಳಿತದ ದಾಖಲೆಗಳಲ್ಲಿ ಪ್ರಗ ತಿಯಲ್ಲಿವೆ ಎಂದಿದೆ. ಇದು ಅಧಿಕಾ ರಿಗಳ ಕಾರ್ಯ ವೈಖರಿ ತೋರಿಸು ತ್ತದೆ. ಎಲ್ಲ ಅನುದಾನಕ್ಕೂ ಮಂಜೂರಾತಿ ಪತ್ರ ನೀಡಿದ್ದೇನೆ.
ಪ್ರಸಾದ ಅಬ್ಬಯ್ಯ
ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.