ವಿಜಯಪುರ: ‘ಜಲಸಂಪನ್ಮೂಲ ಸಚಿವರಿಗೆ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡಲು ಪುರುಸೊತ್ತಿಲ್ಲದಾಗಿದೆ. ಬೇರೆ ಕ್ಷೇತ್ರದ ಆಸಕ್ತಿಯಲ್ಲಿ ತಲ್ಲೀನ ರಾಗಿದ್ದಾರೆ. ಅಧಿಕಾರದಲ್ಲಿ ಮುಂದುವರಿ ಯುವ ಯಾವ ನೈತಿಕತೆಯೂ ಅವರಿಗಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಂ.ಬಿ. ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.
‘ಸರ್ಕಾರಿ ಖಜಾನೆಯ ಹಗಲು ದರೋಡೆ ನಡೆಸಿರುವ ಸಚಿವನ ವಿರುದ್ಧ ಅಗತ್ಯ ದಾಖಲೆ ಸಂಗ್ರಹಿಸಿದ್ದು, ಅ 23ರಂದು ವಿಜಯಪುರದಲ್ಲೇ 50–60 ಸಾವಿರ ಜನರೊಟ್ಟಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಬುಧವಾರ ಇಲ್ಲಿ ತಿಳಿಸಿದರು.
‘2012ರಲ್ಲಿ ಬಿಜೆಪಿ ಸರ್ಕಾರ ಆಲಮಟ್ಟಿಯ ಅಣೆಕಟ್ಟಿನ ಎತ್ತರ ಹೆಚ್ಚಿಸಲು ₹ 17207 ಕೋಟಿ ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಇದರೊಳಗೆ ಮುಳುಗಡೆಯಾಗುವ 22 ಹಳ್ಳಿಗಳ ಸ್ಥಳಾಂತರ, ಅವರಿಗೆ ಪುನರ್ ವಸತಿ ಸೇರಿದಂತೆ ಭೂ ಪರಿಹಾರವನ್ನು ನಿಗದಿ ಪಡಿಸಲಾಗಿತ್ತು.
ವಿಜಯಪುರ ಜಿಲ್ಲೆಯ ಪುಣ್ಯಾತ್ಮನೇ ಜಲಸಂಪನ್ಮೂಲ ಸಚಿವನಾಗಿದ್ದರೂ, ಈ ಭಾಗದ ಜನರಿಗೆ ಪ್ರಯೋಜನ ವಾಗದಾಗಿದೆ’ ಎಂದು ಬಿಎಸ್ವೈ ಸಚಿವ ಎಂ.ಬಿ.ಪಾಟೀಲ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಟೀಕಿಸಿದರು.
* *
ಧರ್ಮದ ವಿಷಯಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ಧಾರಕ್ಕೆ ಬದ್ಧ. ಈ ವಿಷಯದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಬಿ.ಎಸ್.ಯಡಿಯೂರಪ್ಪ
ಅಧ್ಯಕ್ಷ, ಬಿಜೆಪಿ ರಾಜ್ಯ ಘಟಕ