ಗುತ್ತಲ: ಇಲ್ಲಿಗೆ ಸಮೀಪದ ನೆಗಳೂರ ಗ್ರಾಮದ ದೊಡ್ಡ ಕೆರೆ ತುಂಗಾ ಮೇಲ್ದಂಡೆ ಕಾಲುವೆಯಿಂದ ಸಂಪೂರ್ಣ ತುಂಬಿ ಹರಿಯುತ್ತಿದೆ. ಅಂದಾಜು 300 ಎಕರೆಗಿಂತ ಅಧಿಕ ವಿಸ್ತೀರ್ಣ ಹೊಂದಿರುವ ದೊಡ್ಡ ಕೆರೆ,1992ರಲ್ಲಿ ಅತಿವೃಷ್ಟಿಯಿಂದಾಗಿ ತುಂಬಿತ್ತು ಎನ್ನುತ್ತಾರೆ ಗ್ರಾಮದ ರೈತ ಪರಮಗೌಡ ಸುಕುಳಿ.
‘ದೊಡ್ಡ ಕೆರೆ ತುಂಬಿರುವುದರಿಂದ ಗ್ರಾಮದ 300ಕ್ಕೂ ಹೆಚ್ಚು ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ. ಇದರಿಂದ ಗ್ರಾಮದ ಎಲ್ಲ ರೈತರು ಉತ್ತಮ ಬೆಳೆ ತೆಗೆಯಲು ಅನುಕೂಲವಾಗಲಿದೆ’ ಎಂದು ಸುಕುಳಿ ಹೇಳಿದರು.
‘ದೊಡ್ಡ ಕೆರೆಯಲ್ಲಿರುವ ತೂಬನ್ನು ತೆಗೆದರೆ ಬಾಂದಾರ ಕೆರೆಯನ್ನೂ ತುಂಬಿಸಬಹುದು. ಆದರೆ, ಇದಕ್ಕೆ ಗ್ರಾಮದ ಮುಖಂಡರು ಬೇಸರ ವ್ಯಕ್ತಪಡಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.