ಗಂಗಾವತಿ: ಇಲ್ಲಿನ ಜಯನಗರದಿಂದ ಕೊಪ್ಪಳ ರಸ್ತೆಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಯಲ್ಲಿನ ಸೇತುವೆ (ಚರಂಡಿ ನೀರು ಹೋಗಲು ರಸ್ತೆ ಮೇಲೆ ಕಟ್ಟಿದ ಸಣ್ಣ ಪ್ರಮಾಣದ ಬ್ರಿಡ್ಜ್) ದಿಢೀರ್ ಕುಸಿದಿದ್ದರಿಂದ ಸಂಚಾರಕ್ಕೆ ಸಾಧ್ಯವಾಗದೇ ಶುಕ್ರವಾರ ನೂರಾರು ಜನ ಪರದಾಡಿದ ಪ್ರಸಂಗ ನಡೆಯಿತು.
ಸಿದ್ದಿಕೇರಿ, ಜಯನಗರ, ಸತ್ಯನಾರಾಯಣ ಪೇಟೆ, ಇದ್ಗಾ ಕಾಲೋನಿ, ಕುವೆಂಪು, ಕುಮಾರರಾಮ ಹಾಗೂ ಸಿದ್ದಾಪುರ ಬಡಾವಣೆ ಸೇರಿದಂತೆ ನಗರದ ವಿವಿಧ ಭಾಗದ ಜನ ಬೈಪಾಸ್ ರಸ್ತೆ ಮೂಲಕ ಕೊಪ್ಪಳ ಅಥವಾ ಸಿಬಿಎಸ್ ವೃತ್ತಕ್ಕೆ ಹೋಗುತ್ತಾರೆ.
ಆದರೆ ಮಧ್ಯರಾತ್ರಿ ಸರಕು ಸಾಗಿಸುವ ವಾಹನವೊಂದು ಭಾರಿ ಪ್ರಮಾಣದಲ್ಲಿ ಸರಕು ಹೇರಿಕೊಂಡು ಬಂದಿದ್ದರಿಂದ ರಸ್ತೆ ಮಧ್ಯೆ ಇರುವ ಈ ಸೇತುವೆ ಕುಸಿದಿದೆ. ಆದರೆ ವಾಹನ ನಿಲ್ಲದೇ ನಗರದೊಳಗೆ ಪ್ರವೇಶಿಸಿದೆ ಎಂದು ಪ್ರತ್ಯಕ್ಷದರ್ಶಿ ಶರಣಪ್ಪ ಟೆಂಗಿನಕಾಯಿ ತಿಳಿಸಿದ್ದಾರೆ.
ಇದರಿಂದಾಗಿ ಈ ಮಾರ್ಗದಲ್ಲಿ ನಿತ್ಯ ಸಂಚರಿಸುವ ನೂರಾರು ವಿದ್ಯಾರ್ಥಿ ಗಳು, ಮಕ್ಕಳನ್ನು ಶಾಲೆಗೆ ಬಿಡಲು ನಿತ್ಯ ಹೋಗುವ ಪಾಲಕರು ಪರದಾಡಿದರು. ಬೇರೆ ದಾರಿ ಇಲ್ಲದ್ದರಿಂದ ಕೆಲವರು ದುರಸ್ತಿಗೀಡಾದ ರಸ್ತೆಯಲ್ಲಿ ನಿಧಾನವಾಗಿ ಚಲಿಸಿದರೆ ಮತ್ತಷ್ಟು ಜನ ಇಕ್ಕಟ್ಟಾದ ರಸ್ತೆಗಳ ಮೂಲಕ ಸುತ್ತು ಬಳಿಸಿ ಓಡಾಡಿದರು.