ಬೆಂಗಳೂರು: ‘ಸಮಾನ ಶಿಕ್ಷಣ ಆಶಯಕ್ಕೆ ವಿರುದ್ಧವಾಗಿ ಶಿಕ್ಷಣ ಇಲಾಖೆಯು ಖಾಸಗಿ ಸಂಸ್ಥೆಗಳ ಜೊತೆ ಮಾಡಿಕೊಂಡಿರುವ ಹೊಸ ಒಪ್ಪಂದವನ್ನು ರದ್ದುಗೊಳಿಸಬೇಕು’ ಎಂದು ಸಮಾನ ಶಿಕ್ಷಣಕ್ಕಾಗಿ ಸಮನ್ವಯ ವೇದಿಕೆಯ ಸಂಚಾಲಕ ಶ್ರೀಪಾದ ಭಟ್ ಒತ್ತಾಯಿಸಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಅಜೀಂ ಪ್ರೇಮ್ಜಿ ಪ್ರತಿಷ್ಠಾನ, ಪ್ರಥಮ್ ಪ್ರತಿಷ್ಠಾನ, ಖಾನ್ ಅಕಾಡೆಮಿ ಮತ್ತು ಶಿಕ್ಷಣ ಪ್ರತಿಷ್ಠಾನದೊಂದಿಗೆ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ಆ ಮೂಲಕ ಶಿಕ್ಷಣ ಕ್ಷೇತ್ರವನ್ನು ಹರಾಜು ಹಾಕುವ ಪ್ರಕ್ರಿಯೆಗೆ ಮುಂದಾಗಿದೆ’ ಎಂದು ಆರೋಪಿಸಿದರು.
‘ಯಾವುದೇ ಕಾರಣಕ್ಕೂ ಈ ಒಪ್ಪಂದ ಜಾರಿಯಾಗಬಾರದು. ಸದನದಲ್ಲಿ ಈ ಕುರಿತು ಸಮಗ್ರ ಚರ್ಚೆಯಾಗಬೇಕು. ಒಂದೊಮ್ಮೆ ಇದು ಜಾರಿಯಾದರೆ, ಖಾಸಗಿ ಕಂಪೆನಿಗಳು ತಮ್ಮ ಹಿತಾಸಕ್ತಿಗೆ ತಕ್ಕಂತೆ ಪಠ್ಯಕ್ರಮವನ್ನು ರೂಪಿಸುತ್ತವೆ. ಶಿಕ್ಷಣದ ಸ್ವರೂಪ ಹಾಗೂ ಉದ್ದೇಶವೇ ಬದಲಾಗುವ ಸಾಧ್ಯತೆ ಇದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.