ಕಡೂರು: ಕಡೂರು ಪಟ್ಟಣದ ಹೊರವಲಯದ ಉಳುಕಿನಕಲ್ಲು-ತಮ್ಮಟದಹಳ್ಳಿಯ ಎಸ್.ಎಚ್.ಡಿ.ಪಿ ಯೋಜನೆಯ ₹ 22 ಕೋಟಿ ವೆಚ್ಚದ 22 ಕಿ.ಮೀ ರಾಜ್ಯ ಹೆದ್ದಾರಿಯ ರಸ್ತೆಯನ್ನು ಸಂಸದ ಎಚ್.ಡಿ. ದೇವೇಗೌಡ ಉದ್ಘಾಟಿಸಿದರು.
ಕಡೂರಿನಲ್ಲಿ ನಡೆಯುತ್ತಿರುವ ರಂಭಾಪುರಿ ಶ್ರೀಗಳ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಬಂದ ಅವರು ಡಾಂಬರೀಕರಣಗೊಂಡ ನೂತನ ರಸ್ತೆಯನ್ನು ಗುರುವಾರ ಲೋಕಾರ್ಪಣೆಗೊಳಿಸಿದರು. ಬಳಿಕ ಉದ್ಘಾಟನೆಗೊಂಡ ಮಾರ್ಗವಾಗಿ ಚಿಕ್ಕನಲ್ಲೂರು ಗ್ರಾಮದವರೆಗೆ ರಸ್ತೆಯನ್ನು ವೀಕ್ಷಿಸಿದರು.
ಶಾಸಕ ವೈ.ಎಸ್.ವಿ. ದತ್ತ ಮಾತನಾಡಿ, ‘ಬಹಳಷ್ಟು ವರ್ಷಗಳಿಂದ ನನೆಗುದ್ದಿಗೆ ಬಿದ್ದಿದ್ದ ಕಡೂರು ಕ್ಷೇತ್ರದ ಉಳುಕಿನಕಲ್ಲು ಕ್ರಾಸಿನಿಂದ ತಮ್ಮಟದಳ್ಳಿ ಗೇಟ್ವರೆಗೆ ರಸ್ತೆ ವಿಸ್ತರಣೆ ಕೈಗೊಳ್ಳಲಾಗಿದೆ. ಈ ಮೂಲಕ ಗ್ರಾಮೀಣ ಪ್ರದೇಶದ ರೈತಾಪಿ ಜನರ ಕೃಷಿ ಉತ್ಪನ್ನಗಳನ್ನು ಕೊಂಡೊಯ್ಯಲು ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಎಸ್.ಎಚ್.ಡಿ.ಪಿ.ಯೋಜನೆಯಲ್ಲಿ ರಾಜ್ಯ ಹೆದ್ದಾರಿಗೆ ₹ 22 ಕೋಟಿ ಅನುದಾನ ತರುವ ಮೂಲಕ ರಸ್ತೆ ಅಭಿವೃದ್ದಿ ಪಡಿಸಲಾಗಿದೆ’ ಎಂದರು.