ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಕ್ರಾಮಿಕ ರೋಗ ನಿಯಂತ್ರಿಸಿ; ಮೇಟಿ

ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆ; ಆರೋಗ್ಯ ಇಲಾಖೆಗೆ ಖಡಕ್ ಸೂಚನೆ ರವಾನೆ
Last Updated 12 ಅಕ್ಟೋಬರ್ 2017, 11:51 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ನಗರ, ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಯಾವುದೇ ರೋಗ ಹರಡದಂತೆ ಮುನ್ನೆಚ್ಚರಿಕೆಯಾಗಿ ಆರೋಗ್ಯ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಮೇಟಿ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೆಪ್ಟಂಬರ್ ತಿಂಗಳವರೆಗಿನ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಮಳೆಗಾಲ ಇರುವುದರಿಂದ ಡೆಂಗಿ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕ ವ್ಯಕ್ತಪಡಿಸಿದರು.

ಮೋಡದ ವಾತಾವರಣ ಇರುವುದರಿಂದ ರೇಷ್ಮೆ ಬೆಳೆಗೆ ಕೀಟ ಬಾಧೆ ತಗುಲಿದೆ. ರೈತರಿಗೆ ನಿರ್ವಹಣೆಯ ಸೂಕ್ತ ಮಾಹಿತಿ ನೀಡಿ ಎಂದು ಇದೇ ಸಂದರ್ಭ ಸಂಬಂಧಿಸಿದ ಅಧಿಕಾರಿಗೆ ಸೂಚನೆ ನೀಡಿದರು.

ಶಿಕ್ಷಣ ಇಲಾಖೆಗೆ 14ನೇ ಹಣಕಾಸು ನಿಧಿಯಿಂದ ಅಗತ್ಯ ಅನುದಾನ ನೀಡಿದ್ದು, ಸಮರ್ಪಕವಾಗಿ ಬಳಕೆಯಾಗಬೇಕು. ಕಳಪೆ ಬಿತ್ತನೆ ಬೀಜ, ಗೊಬ್ಬರ ವಿತರಕರ ಕುರಿತು ಕೃಷಿ ಇಲಾಖೆ ಮುನ್ನೆಚ್ಚರಿಕೆ ವಹಿಸಿ ಸಮಿತಿ ರಚಿಸಿ, ದಾಳಿ ನಡೆಸಬೇಕು.

ಪಡಿತರ ವಿತರಣೆಯಲ್ಲಿ ಯಾವುದೇ ರೀತಿಯ ಅವ್ಯವಹಾರವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪಡಿತರ ದಿನಸಿಗಳ ನಿಗದಿತ ಬೆಲೆಯನ್ನು ಎಲ್ಲ ನ್ಯಾಯಬೆಲೆ ಅಂಗಡಿಯಲ್ಲಿ ದರಪಟ್ಟಿ (ದಿನಸಿ ಬೆಲೆಗಳು)ಯನ್ನು ಹಾಕಲು ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಆದೇಶಿಸಿದರು.

ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಸುಂದರೇಶ ಬಾಬು ಮಾತನಾಡಿ ಮಾತೃಪೂರ್ಣ ಯೋಜನೆಯಡಿ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ಒದಗಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಈ ಯೋಜನೆಯಡಿ ಯಾವ ಲೋಪದೋಷವೂ ಕಂಡು ಬರದಂತೆ ಕ್ರಮವಹಿಸಬೇಕು.

ಅಂಗನವಾಡಿಗಳಿಗೆ 500 ನಿವೇಶನಗಳ ಅಗತ್ಯವಿದ್ದು ಅವುಗಳನ್ನು ಗುರುತಿಸುವ ಕಾರ್ಯ ಚುರುಕುಗೊಳಿಸಿಸಬೇಕು. ಈಗಾಗಲೇ ಗುರುತಿಸಿದ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ಅಂಗನವಾಡಿ, ಆಶಾ ಸೇರಿದಂತೆ 4500 ಕಾರ್ಯಕರ್ತೆಯರಿಗೆ ಕಡ್ಡಾಯವಾಗಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಅದೇಶಿಸಿದ್ದು, ಇನ್ನೂ ಕೆಲವೆಡೆ ಈ ಆದೇಶ ಪೂರ್ಣ ಪ್ರಗತಿ ಸಾಧಿಸಿಲ್ಲ. ಶೀಘ್ರ ಶೌಚಾಲಯ ನಿರ್ಮಿಸಿಕೊಳ್ಳಲು ಸೂಚಿಸಿ.

ಗ್ರಾಮಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಪ್ರತಿ ಕಾರ್ಯಕರ್ತೆಯೂ 10 ಅಪೌಷ್ಟಿಕತೆ ಹೊಂದಿರುವ ಮಕ್ಕಳನ್ನು ದತ್ತು ಪಡೆದು ಮೂರು ತಿಂಗಳಲ್ಲಿ ಆ ಮಗು ಸದೃಢವಾಗುವಂತೆ ಮಾಡಬೇಕು. ಈ ನಿಯಮ ಪಾಲಿಸದಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದರು.

ಶಿಕ್ಷಣ ಇಲಾಖೆಗೆ ಬೇರೆ ಬೇರೆ ಇಲಾಖೆ, ಗ್ರಾ.ಪಂ.ಗಳಿಂದ ವಿವಿಧ ಯೋಜನೆಯಡಿ ₹ 20 ಕೋಟಿ ಮೀಸಲಿ ರಿಸಲಾಗಿದೆ. ಶಾಲೆಗಳಿಗೆ ಅಗತ್ಯವಾದ ಶೌಚಾಲಯ, ಶೌಚಾಲಯಕ್ಕೆ ನೀರಿನ ಪೂರೈಕೆ, ಕುಡಿಯುವ ನೀರಿನ ಪೂರೈಕೆ, ಶಾಲಾ ಆವರಣ ಗೋಡೆ ನಿರ್ಮಾಣ, ಶಾಲಾ ಆಟದ ಮೈದಾನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ, ಶಿಕ್ಷಣಕ್ಕಾಗಿ ಅನುಕೂಲಕರವಾದ ವಾತಾವರಣ ರೂಪಿಸುವಂತೆ ಡಿಡಿಪಿಐಗೆ ಸಿಇಓ ಸೂಚಿಸಿದರು.

ತೋಟಗಾರಿಕೆ ಇಲಾಖೆಯಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಪಾಲಿಹೌಸ್ ನಿರ್ಮಾಣ, ಸೋಲಾರ್ ಪಂಪ್‌ಸೆಟ್, ಕೃಷಿ ಹೊಂಡ ನಿರ್ಮಾಣಕ್ಕೆ ನೀಡುವ ಸಹಾಯಧನದ ಕುರಿತು ಸೂಕ್ತ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ನೀರು ನಿರ್ವಹಣಾ ಯೋಜನೆಯಡಿ 11 ಕಾಮಗಾರಿ ಪೂರ್ಣಗೊಳ್ಳಬೇಕು. ಆದರೆ ಇನ್ನೂ 6 ಕಾಮಗಾರಿ ಬಾಕಿ ಉಳಿದಿವೆ. ಈ ಕುರಿತು ಕ್ರಮ ಕೈಗೊಳ್ಳಬೇಕು. ಸಿಂದಗಿ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಕೊರತೆಯಿದೆ. ಇದನ್ನು ಬೇಗ ಸರಿಪಡಿಸಿ, ವೈದ್ಯರನ್ನು ನೇಮಿಸಿ ಎಂದು ಡಿಎಚ್‌ಓಗೆ ಸೂಚಿಸಿದರು.

ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರಾಮು ಸೋಮು ರಾಠೋಡ, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT