ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಹೆಚ್ಚುವರಿಯಾಗಿ 1,500 ವಿಶೇಷ ಬಸ್ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.
ಇದೇ 17ರಿಂದ 19ರವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಗೆ ವಿಶೇಷ ಬಸ್ಗಳು ಹೊರಡಲಿವೆ. 22ರಂದು ಬೆಂಗಳೂರಿಗೆ ವಾಪಸ್ ಬರಲಿವೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಹಾಸನ, ಶಿವಮೊಗ್ಗ, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಬಸ್ಗಳು ಹೊರಡಲಿವೆ.
ಮೈಸೂರು, ಮಡಿಕೇರಿ ಭಾಗಕ್ಕೆ ತೆರಳುವ ಬಸ್ಗಳು ಸ್ಯಾಟ್ಲೈಟ್ ಬಸ್ ನಿಲ್ದಾಣದಿಂದ ಹಾಗೂ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕಡೆಗೆ ಹೋಗುವ ಬಸ್ಗಳು ಶಾಂತಿನಗರದ ಟಿಟಿಎಂಸಿ ನಿಲ್ದಾಣದಿಂದ ಹೊರಡಲಿವೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ವಿಜಯನಗರ, ಜೆ.ಪಿ. ನಗರ, ಜಯನಗರ 4ನೇ ಬ್ಲಾಕ್ ಮತ್ತು 9ನೇ ಬ್ಲಾಕ್, ಜಾಲಹಳ್ಳಿ ಕ್ರಾಸ್, ನವರಂಗ್ (ರಾಜಾಜಿನಗರ), ಮಲ್ಲೇಶ್ವರ 18ನೇ ಕ್ರಾಸ್, ಕೆಂಗೇರಿ ಉಪನಗರದಿಂದಲೂ ಬಸ್ಗಳು ಹೊರಡಲಿವೆ ಎಂದು ವಿವರಿಸಿದ್ದಾರೆ.